Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, August 30, 2011

Bhagavad Geeta Kannada Chapter-10 Shloka 12-14


ಅರ್ಜುನ ಉವಾಚ
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್
ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್        ೧೨

ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ೧೩


ಅರ್ಜುನಃ  ಉವಾಚ--ಅರ್ಜುನನು ಹೇಳಿದನು:
ಪರಮ್  ಬ್ರಹ್ಮ ಪರಮ್  ಧಾಮ ಪವಿತ್ರಮ್  ಪರಮಮ್  ಭವಾನ್
ಪುರುಷಮ್  ಶಾಶ್ವತಮ್  ದಿವ್ಯಮ್ ಆದಿ ದೇವಮ್ ಅಮ್  ವಿಭುಮ್  ||
ಹುಃ ತ್ವಾಮ್ ಋಷಯಃ ಸರ್ವೇ ದೇವ ಋಷಿಃ ನಾರದಃ ತಥಾ
ಅಸಿತಃ  ದೇವಲಃ  ವ್ಯಾಸಃ ಸ್ವಯಂ ಚ ಏವ ಬ್ರವೀಷಿ ಮೇ  -- ಪೂಜ್ಯನಾದ ನೀನು ಹಿರಿದಕ್ಕಿಂತ ಹಿರಿಯ ತತ್ವ. ಹಿರಿಯ ಆಸರೆ. ಪಾವನಗಳಿಗೂ ಪಾವನ. ನಿನ್ನನ್ನು ಗುಣಪೂರ್ಣನಾದ, ಪರಮ ‘ಪುರುಷ’ನೆಂದು, ಬದಲಾಗದವನೆಂದು, ಲೀಲಾಮಯನೆಂದು, ಎಲ್ಲ ದೇವತೆಗಳಿಗೂ ಮೊದಲಿಗನೆಂದು, ಜನ್ಮರಹಿತನೆಂದು, ಬಗೆಬಗೆಯ ರೂಪಗಳಿಂದ ಎಲ್ಲೆಡೆ ತುಂಬಿರುವವನೆಂದು ಬಲ್ಲವರೆಲ್ಲ ಹೊಗಳುತ್ತಾರೆ. ದೇವರ್ಷಿ ನಾರದ ಕೂಡ. ಅಸಿತ-ದೇವಲರು ಕೂಡ. ವ್ಯಾಸ ಮುನಿ ಹೇಳಿದ್ದುಂಟು. ಸ್ವತಃ ನೀನೂ ನನಗೆ ಹೇಳುತಿದ್ದೀಯಾ.

ಇಲ್ಲಿ ಅರ್ಜುನ ಕೃಷ್ಣನನ್ನು “ಪರಂಬ್ರಹ್ಮ, ಪರಂಧಾಮ, ಪರಮಪವಿತ್ರ ನೀನು”  ಎಂದು  ಸಂಬೋಧಿಸುತ್ತಾನೆ. ಯಾವುದು ಎಲ್ಲವುದಕ್ಕಿಂತ ದೊಡ್ಡದೋ ಅದು ಬ್ರಹ್ಮ. ಬ್ರಹ್ಮ ಅನ್ನುವ ಪದವನ್ನು ಇನ್ನೂ ಅನೇಕ ಅರ್ಥದಲ್ಲಿ ಬಳಸುತ್ತಾರೆ. ಅದಕ್ಕಾಗಿ ಇಲ್ಲಿ ಸ್ಪಷ್ಟತೆಗಾಗಿ ‘ಪರಂ ಬ್ರಹ್ಮ’ ಎಂದಿದ್ದಾರೆ. “ಎಲ್ಲಕ್ಕಿಂತ ದೊಡ್ಡವ ಮತ್ತು ನಂಬಿದವರನ್ನು ಎತ್ತರಕ್ಕೇರಿಸುವ ನೀನು ಪರಿಪೂರ್ಣ. ನಾನು ನನ್ನ ವ್ಯಕ್ತಿತ್ವದ ಪೂರ್ಣತೆಯನ್ನು ಕಾಣಲು ನಿನ್ನ ಅನುಗ್ರಹ ಬೇಕು” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇನ್ನು ಪರಂ ಧಾಮ: ‘ಧಾಮ’ ಅಂದರೆ ಆಶ್ರಯ. ಭಗವಂತನನ್ನು ಆಶ್ರಯಿಸದೆ ಇರುವ ಒಂದು ವಸ್ತು ಈ ಜಗತ್ತಿನಲ್ಲಿಲ್ಲ. “ನೀನು ಸರ್ವಸ್ವತಂತ್ರ, ಮತ್ತು ನಾವೆಲ್ಲರೂ ನಿನ್ನ ಅಧೀನ, ನೀನು ಆಶ್ರಯಧಾತ ಮತ್ತು ನಾವು ಆಶ್ರಿತರು” ಎನ್ನುವ ಅರ್ಥದಲ್ಲಿ ಅರ್ಜುನ ಕೃಷ್ಣನನ್ನು ‘ಪರಂ ಧಾಮ’ ಎಂದಿದ್ದಾನೆ. ತತ್ವಾಭಿಮಾನಿ ದೇವತೆಗಳು ಒಂದೊಂದು ರೂಪದಲ್ಲಿ ನಮಗೆ ಆಶ್ರಯ ನೀಡುತ್ತಾರೆ. ಆದರೆ ಇಂತಹ ದೇವತೆಗಳಿಗೂ ಆಶ್ರಯಧಾತನಾಗಿರುವ ಭಗವಂತ ಪರಂ ಧಾಮ. ಸಮಸ್ತ ಜೀವರ ಅನಂತ ಯಾತ್ರೆಯಲ್ಲಿ ಆಶ್ರಯಧಾತನಾಗಿ ಉದ್ಧಾರ ಮಾಡುವ ಭಗವಂತ ಸರ್ವಾಶ್ರಯಧಾತ.
ಭಗವಂತ ‘ಪರಮಪವಿತ್ರ’. ಇಂತಹ  ಭಗವಂತನನ್ನು ನಾವು ಪವಿತ್ರತೆಯ ಪ್ರತೀಕವಾದ  ಅಗ್ನಿ ಮುಖೇನ  ಉಪಾಸನೆ ಮಾಡುತ್ತೇವೆ. ಅಗ್ನಿ ಸ್ವಯಂ ಪವಿತ್ರ ಮತ್ತು ಅದು ಎಂದೂ ಕೊಳಕಾಗುವುದಿಲ್ಲ. ಅಗ್ನಿ ತನ್ನ ಸ್ಪರ್ಶಕ್ಕೆ ಬಂದ ವಸ್ತುವನ್ನು  ಕೊಳೆರಹಿತ ಮಾಡುತ್ತದೆ. ಭಗವಂತ ನಮ್ಮನ್ನು ಮತ್ತು ಪ್ರಪಂಚವನ್ನು ಪಾವನಗೊಳಿಸುವ ಪರಮಶಕ್ತಿ.
ಅರ್ಜುನ ಇಲ್ಲಿ ತನ್ನೆಲ್ಲಾ ಭೌತಿಕ ಸಂಬಂಧವನ್ನು ಮೀರಿ ತನ್ನೆದುರು ನಿಂತಿರುವ ಆ ಪರಬ್ರಹ್ಮನನ್ನು ಕಾಣುತ್ತಿದ್ದಾನೆ. “ನನ್ನಲ್ಲಿ ಕೊಳೆ ತುಂಬಿದೆ, ಅಸೂಯೆ ಅಸಹನೆ ತುಂಬಿದೆ. ನಿನ್ನ ಅನುಗ್ರಹದಿಂದ, ಆಶ್ರಯದಿಂದ ನಾನು ಪವಿತ್ರನಾಗಬೇಕು. ನಿನ್ನಿಂದ ನಾನು ಆ ಎತ್ತರಕ್ಕೇರಿ ನನ್ನ ಪೂರ್ಣತೆಯನ್ನು ಪಡೆಯಬೇಕು” ಎನ್ನುವ ಬಯಕೆ ಅರ್ಜುನನ ಈ ಸಂಬೋಧನೆಯಲ್ಲಿದೆ.
ಕೆಲವೊಮ್ಮೆ ನಾವು ಉದ್ವೇಗದಿಂದ ಅತಿಶಯವಾಗಿ ಮಾತನಾಡುತ್ತೇವೆ. ಇಲ್ಲಿ ಅರ್ಜುನ ತಾನು ಉದ್ವೇಗದಿಂದ ಮಾತನಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಒಬ್ಬ ಸಾಧಕನಿಗೆ ದೇವರ ಉಪಾಸನೆಯಲ್ಲಿ ಇದು ಬಹಳ ಮುಖ್ಯ ಅಂಶ. ಏಕೆಂದರೆ ನಾವು ದೇವರ ಬಗ್ಗೆ ಏನು ಕಲ್ಪನೆ ಮಾಡಿದರೂ ಅದು ಕೇವಲ ಕಲ್ಪನೆ ಹೊರತು ಸಾಕ್ಷಾತ್ಕಾರವಲ್ಲ. ನಮ್ಮ ಕಲ್ಪನೆ ನಮ್ಮ ಮನಸ್ಸಿನ ಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. ಮನಸ್ಸಿನಲ್ಲಿ ಉತ್ಸಾಹ ಇದ್ದಾಗ ಏನೇನೋ ಹೊಸ-ಹೊಸ ಕಲ್ಪನೆಗಳು ಬರುತ್ತವೆ. ಅವೆಲ್ಲವೂ ಸತ್ಯವಾಗಿರಬೇಕೆಂದಿಲ್ಲ. ಹಾಗಾಗಿ ಅವರವರ ಬುದ್ಧಿ ಮಟ್ಟಕ್ಕೆ ತಕ್ಕಂತೆ ಅವರವರ ಕಲ್ಪನೆ ಹೊರತು ಭಗವಂತ ಹೇಗಿದ್ದಾನೆ ಹಾಗೆ ನಮ್ಮ ಕಲ್ಪನೆ ಇರುವುದಿಲ್ಲ. ಈ ಕಾರಣದಿಂದ ಇಲ್ಲಿ ಅರ್ಜುನ ತನಗೆ ಬಂದ ವಿಚಾರ ತನ್ನ ಬುದ್ಧಿಮಟ್ಟದ ಕಲ್ಪನೆಯಲ್ಲ ಇದು ವಸ್ತುಸ್ಥಿತಿ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಆತ ಋಷಿಗಳು, ದೇವರ್ಷಿ ನಾರದರು ಹೇಳಿರುವ ಮಾತನ್ನು ಇಲ್ಲಿ ನೆನಪಿಸಿಕೊಳ್ಳುತ್ತಾನೆ.
ಅರ್ಜುನ ಹೇಳುತ್ತಾನೆ “ನಿನ್ನನ್ನು ಪುರುಷಃ, ಶಾಶ್ವತಃ, ದಿವ್ಯಃ, ಆದಿದೇವಃ ಅಜಃ , ವಿಭುಃ ಎಂದು ಈ ಮಹಾತ್ಮರು ಹೇಳಿದ್ದಾರೆ” ಎಂದು. ಇಲ್ಲಿ ಬಳಸಿರುವ ಒಂದೊಂದು ಪದದಲ್ಲಿ  ಭಗವಂತನ ಅನಂತ ಗುಣ ಅಡಗಿದೆ. ವಿಷ್ಣುಸಹಸ್ರನಾಮದಲ್ಲಿ ಈ ಎಲ್ಲಾ ಪದಗಳನ್ನು  ಭಗವಂತನ ನಾಮವಾಗಿ ನಾವು ಕಾಣುತ್ತೇವೆ. ಬನ್ನಿ, ಇಲ್ಲಿ ಸಂಕ್ಷಿಪ್ತವಾಗಿ ಈ ಪದಗಳ ಅರ್ಥಾನುಸಂಧಾನ ಮಾಡೋಣ:  
ಪುರುಷಃ : ಇಲ್ಲಿ ಪುರುಷ ಎಂದರೆ ಗಂಡಸು ಎನ್ನುವ ಅರ್ಥವಲ್ಲ. ಪುರದಲ್ಲಿ ವಾಸಿಸುವವನು ‘ಪುರುಷಃ’.  ಸಮಸ್ತ ವೇದಗಳ ಸಾರಭೂತವಾದ ಸೂಕ್ತಗಳ ರಾಜ ‘ಪುರುಷಸೂಕ್ತ’ ಭಗವಂತನನ್ನು ಸಹಸ್ರ ಶೀರ್ಷಾ ಪುರುಷಃ' ಎಂದು ಕರೆದಿದೆ.  ಸೃಷ್ಟಿ ಕಾಲದಲ್ಲಿ ಏನೂ ಇಲ್ಲದಾಗಲೂ ಇದ್ದು, ಈ ಸೃಷ್ಟಿಯನ್ನು ನಿರ್ಮಾಣ ಮಾಡಿದ ಭಗವಂತ ಪುರಾ+ಷಃ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸುಟ್ಟ ಭಗವಂತ ಪುರ-ಉಷ. ಪ್ರಪಂಚದಲ್ಲಿ ಅನಂತವಾಗಿ, ಅನಂತ ಕಾಲ, ಅನಂತ ಸಾಮರ್ಥ್ಯ, ಅನಂತ ಗುಣಗಳಿಂದ ತುಂಬಿರುವ ಭಗವಂತ ಪುರ-ಸಹ. ಪ್ರಳಯ ಕಾಲದಲ್ಲಿ ಏನೂ ಇಲ್ಲದಾಗ ಇದ್ದು, ಸೃಷ್ಟಿ ಕಾಲದಲ್ಲಿ ತನ್ನ ನಾಭಿಯಿಂದ ಒಂದೊಂದನ್ನು ಸೃಷ್ಟಿ ಮಾಡಿದ ಭಗವಂತ, ಮೊದಲು "ಮಹತತ್ವವನ್ನು" ಸೃಷ್ಟಿ ಮಾಡಿದ. ಮಹತತ್ವ ಎಂದರೆ ಇಡೀ ಪ್ರಪಂಚದ ಭೂತಪ್ರಜ್ಞೆ ಜಾಗೃತಿ. ಹಿಂದೆ ಇದ್ದ ಸಮಸ್ತ ಸೃಷ್ಟಿಯ ಸ್ಮರಣೆಯನ್ನು ಚಿತ್ತಾಭಿಮಾನಿ ಬ್ರಹ್ಮ-ವಾಯುವಿಗೆ ಕೊಟ್ಟು, ಸೂಕ್ಷ್ಮ ರೂಪದ ಪ್ರಪಂಚ ನಿರ್ಮಾಣ. ನಂತರ ದೇವತೆಗಳು, ಪಂಚಭೂತಗಳ ನಿರ್ಮಾಣ. ಹೀಗೆ ನಿರ್ಮಾಣವಾದ ಸ್ಥೂಲ ಬ್ರಹ್ಮಾಂಡದೊಳಗೆ ಭಗವಂತ ತುಂಬಿಕೊಂಡ. ಒಂದೊಂದು ಪಿಂಡಾಂಡದೊಳಗೆ ಒಂದೊಂದು ರೂಪದಲ್ಲಿ ಬಿಂಬ ರೂಪನಾಗಿ ತುಂಬಿ ಆ ಪಿಂಡಾಂಡದಿಂದ ಮಾಡಿಸಬೇಕಾದ ಕಾರ್ಯವನ್ನು ಮಾಡಿಸಿ, ಮೋಕ್ಷವನ್ನು ಕರುಣಿಸುವ ಭಗವಂತ ಪುರುಷಃ. ಹೀಗೆ ಸೃಷ್ಟಿಯ ಮೊದಲು, ಸೃಷ್ಟಿಯ ಕಾಲದಲ್ಲಿ, ಸೃಷ್ಟವಾದ ವಸ್ತುವಿನೊಳಗೆ, ಸೃಷ್ಟಿಯ ಸಾಧನೆಯಲ್ಲಿ, ಸಾಧನೆಯಿಂದ ಮುಕ್ತಿಯ ತನಕ ಎಲ್ಲೆಡೆ ಇರುವ ಈ ಹೃತ್ಕಮಲ ಮಧ್ಯ ನಿವಾಸಿ ಭಗವಂತ, ಪೂರ್ಣವಾದ ಷಡ್ಗುಣಗಳಿಂದ ತುಂಬಿರುವ ಜ್ಞಾನಾನಂದ ಸ್ವರೂಪ. ಪು+ರು+ಷಃ=ಪುರುಷಃ; ಇಲ್ಲಿ 'ಪು' ಎಂದರೆ ನಮ್ಮನ್ನು ಪಾವನಗೊಳಿಸುವ ಪರಮಪವಿತ್ರ. 'ರು' ಎಂದರೆ 'ರುವಂತಿ' , ಪ್ರಪಂಚದ ಎಲ್ಲಾ ಶಬ್ದಗಳಿಂದ ವಾಚ್ಯನಾದವನು. 'ಷಃ' ಅಥವಾ 'ಸಹ' ಎಂದರೆ ಎಲ್ಲಾ ವಸ್ತುಗಳೊಳಗೆ ತುಂಬಿರುವ ಸರ್ವಾಂತರ್ಯಾಮಿ ತತ್ವ. ಹೀಗೆ ಪುರುಷಃ ಎನ್ನುವ ಭಗವಂತನ ನಾಮ ಅನೇಕ ರೀತಿಯಲ್ಲಿ ಭಗವಂತನ ಗುಣಾನುಸಂಧಾನ ಮಾಡುವ ನಾಮ.
ಶಾಶ್ವತಃ: ಅನಾದಿ ಅನಂತ ಕಾಲದಲ್ಲಿ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವ ಆನಂದಸ್ವರೂಪ ಭಗವಂತ ಶಾಶ್ವತಃ .
ದಿವ್ಯಃ : ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ದೇವರುಈ ಪದಗಳು ದಿವುಎನ್ನುವ ದಾತುವಿನಿಂದ ಬಂದಿರುವುದು. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು.
೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.
೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ.
೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.
೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.
೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.
೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. 
೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ  'ದೇವ'.
ಆದಿದೇವಃ: ಈ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ ಯಾರಿಗೆ ಲೀಲಾ ಮಾತ್ರವೋ ಆತ ಆದಿದೇವಃ. ಭಗವಂತ ಈ ಪ್ರಪಂಚ ಇರುವಾಗಲೂ, ಇಲ್ಲದಾಗಲೂ ಇರುವವ. ಆತ ಎಲ್ಲಕ್ಕಿಂತ ಎತ್ತರದಲ್ಲಿರುವವನು. ಎಲ್ಲಾ ಕಾಲದಲ್ಲೂ  ಜಗತ್ತಿನ ಸರ್ವ ವ್ಯವಹಾರವನ್ನು ನಡೆಸುವವ ಆತ. ಹೀಗೆ ಎಲ್ಲವುದರ ಒಳಗಿದ್ದು, ಎಲ್ಲಾ ಕ್ರಿಯೆಗಳನ್ನು ನಡೆಸುವ ಭಗವಂತ ಆದಿದೇವಃ.    
ಅಜಃ: 'ನ ಜಾಯತೇ ಇತಿ ಅಜಃ'; '' ಎಂದರೆ ಜನನ; ಅ+ಜಃ-ಅಜಃ ಎಂದರೆ ಹುಟ್ಟಿರದವನು. ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿದ  ಚತುರ್ಮುಖನನ್ನು ಅಜ ಎನ್ನುತ್ತಾರೆ. ಇಂತಹ ಚತುರ್ಮುಖನೊಳಗೆ ಸನ್ನಿಹಿತನಾಗಿ, ಸೃಷ್ಟಿ ಮಾಡುವ ಭಗವಂತ, ತಾನು ಹುಟ್ಟದೆ, ಎಲ್ಲವನ್ನೂ ಸೃಷ್ಟಿ ಮಾಡಿ ಸಂಹಾರ ಮಾಡುವ ಅಜಃ. ಎಲ್ಲರೂ ಭಗವಂತನ ಮಕ್ಕಳು, ಆದರೆ ಆತ ಯಾರಿಗೂ ಹುಟ್ಟಿದವನಲ್ಲ. ಏಕೆಂದರೆ ಅವನಿಗೆ ಹುಟ್ಟು-ಸಾವು ಎಂಬುದಿಲ್ಲ. ಇನ್ನು ಅಜಃ ಎಂದರೆ ಎಲ್ಲ ಕಡೆ ವ್ಯಾಪಿಸಿರುವವನು ಕೂಡಾ ಹೌದು. ಅ+ಜ-ಅಜಃ. ಇಲ್ಲಿ '' ಎಂದರೆ 'ಅಲ್ಲ' ಅಥವಾ ಇಲ್ಲ! ಅಂದರೆ ಅವನು ನಾವು ತಿಳಿದ ಯಾವ ವಸ್ತುವೂ ಅಲ್ಲ. ಅವನಲ್ಲಿ ಯಾವ ದೋಷವೂ ಇಲ್ಲ. ಇನ್ನೊಂದು ಅರ್ಥದಲ್ಲಿ ಅಜಃ ಅಂದರೆ ಯಾರಿಂದಲೂ ಹುಟ್ಟದವನು-ಆದರೆ ಎಲ್ಲರಲ್ಲೂ ಹುಟ್ಟುವವನು! ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಆತ ಹುಟ್ಟುತ್ತಾನೆ. ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ.
ವಿಭುಃ: ವಿವಿಧ+ಭವತಿ- ಅಂದರೆ ವಿವಿಧ ರೂಪ ತೊಟ್ಟ ಅನಂತರೂಪಿ.  ಸರ್ವಸಮರ್ಥನಾಗಿ ಪ್ರಪಂಚದಲ್ಲೆಲ್ಲಾ ತುಂಬಿರುವ ಭಗವಂತ ವಿಭುಃ.
ಇಲ್ಲಿ ಅರ್ಜುನ ವಿಶೇಷವಾಗಿ ದೇವರ್ಷಿ ನಾರದ, ಅಸಿತ-ದೇವಲ ಮತ್ತು ವ್ಯಾಸರ ಹೆಸರನ್ನು ಉಲ್ಲೇಖಿಸುತ್ತಾನೆ. ಏಕೆಂದರೆ ಅರ್ಜುನ ಇವರನ್ನು ಕಂಡಿದ್ದ ಮತ್ತು ಅವರು ಭಗವಂತನ ಬಗೆಗೆ ಹೇಳುವುದನ್ನು ಕೇಳಿದ್ದ. ನಾರದ ಮಹಾನ್ ಜ್ಞಾನಿ ಎನ್ನುವುದು ನಮಗೆ ತಿಳಿದಿದೆ. ದೇವತಾ ತಾರತಮ್ಯದಲ್ಲಿ ಇವರು ಹದಿನಾಲ್ಕನೇ ಮೆಟ್ಟಿಲಲ್ಲಿದ್ದಾರೆ. ಇವರು ಧರ್ಮರಾಯನ ಆಸ್ಥಾನದಲ್ಲಿ  ಭಗವಂತನ ಅಗ್ರಪೂಜೆ ನಡೆದಾಗ  ಬಂದು ಹರಸಿರುವ ದೇವಲೋಕದ ಋಷಿ. ನರ ಸಮುದಾಯದಲ್ಲಿರುವ ಅಜ್ಞಾನವನ್ನು ಸಂಹಾರ ಮಾಡಿ, ಭಗವಂತನ ಜ್ಞಾನವನ್ನು ಕೊಡುವ ನಾರದ, ನಮಗೆ ಸತ್ಯವನ್ನು ಹೊಳೆಸುವ ಅಂತಃಪ್ರಜ್ಞೆಯ(Intuition)ದೇವತೆ. ಆಜ್ಞಾಚಕ್ರವನ್ನು ಜಾಗೃತಗೊಳಿಸಿದಾಗ ನಮಗೆ ನಾರದರ ದರ್ಶನವಾಗುತ್ತದೆ. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದನ್ನು ಅಂತರ್ದೃಷ್ಟಿಯಿಂದ ಉತ್ತರಿಸುವವರು ನಾರದರು.  ಅಸಿತ-ದೇವಲರು ಮಂತ್ರದೃಷ್ಟಾರರಾದ ವೇದಕಾಲದ ಋಷಿಗಳು. ಇವರು ಧರ್ಮರಾಯನ ಸಭೆಗೆ ಬಂದು ಆತನಿಗೆ ಧರ್ಮೋಪದೇಶ ಮಾಡಿದ್ದನ್ನು ಅರ್ಜುನ ನೋಡಿದ್ದ. ಇನ್ನು ವ್ಯಾಸರು: ವೇದವನ್ನು ವಿಭಾಗ ಮಾಡಿ, ನಮಗೆ ಹದಿನೆಂಟು ಪುರಾಣವನ್ನು, ಮಹಾಭಾರತ, ಪಂಚಮವೇದವನ್ನು ಕೊಟ್ಟ ಭಗವಂತನ ಅವತಾರ. “ಈ ಎಲ್ಲಾ ಮಹಾತ್ಮರು ಏನನ್ನು ಹೇಳಿದ್ದರೂ ಅದನ್ನೇ ನೀನು ನನಗೆ ಹೇಳುತ್ತಿದ್ದೀಯ” ಎನ್ನುತ್ತಾನೆ ಅರ್ಜುನ. ಹೀಗೆ ತನಗಾಗುತ್ತಿರುವ  ಅನುಭವ ಕೇವಲ ಭ್ರಮೆ ಅಲ್ಲ ಎನ್ನುವುದನ್ನು ಅರ್ಜುನ ಖಚಿತಪಡಿಸಿಕೊಳ್ಳುತ್ತಾನೆ.        

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ
ನಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ೧೪

ಸರ್ವಮ್ ಏತತ್ ಋತಮ್ ಮನ್ಯೇ ಯತ್ ಮಾಮ್ ವದಸಿ ಕೇಶವ
ಹಿ ತೇ ಭಗವನ್ ವ್ಯಕ್ತಿಮ್  ವಿದುಃ ದೇವಾಃ ನ ದಾನವಾಃ – ಓ ಕೇಶವ, ನೀನು ನನಗೇನು ಹೇಳಿದೆ ಅದೆಲ್ಲ ನಿಜವೆಂದು ಬಲ್ಲೆ. ಓ ಭಗವಾನ್, ನೀನು ಮೂಡಿಬಂದ ಬಗೆಯನ್ನು ದೇವತೆಗಳಾಗಲಿ, ದಾನವರಾಗಲಿ ಅರಿತವರಲ್ಲ.

“ನೀನು ಹೇಳುತ್ತಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎನ್ನುವುದನ್ನು ಬಲ್ಲೆ. ನಿನ್ನ ಅರಿವಿನ ಅಭಿವ್ಯಕ್ತಿಯನ್ನು ದೇವತೆಗಳಾಗಲಿ ದಾನವರಾಗಲಿ ತಿಳಿದಿಲ್ಲ” ಎನ್ನುತ್ತಾನೆ ಅರ್ಜುನ. ದೇವತೆಗಳಿಗೆ ಭಗವಂತನ ಗುಣಪ್ರಮಾಣವನ್ನು ಅಳೆಯಲು ಸಾಧ್ಯವಾಗಿಲ್ಲ. ದಾನವರು ಭಗವಂತನಲ್ಲಿ ದೋಷ ಹುಡುಕುವುದರಲ್ಲಿ ಯಶಸ್ವಿ ಆಗಿಲ್ಲ. ಏಕೆಂದರೆ ಭಗವಂತ ಅನಂತ ಗುಣಪೂರ್ಣ. ಆತನಲ್ಲಿ ಯಾವುದೇ ದೋಷವಿಲ್ಲ. ಆತನನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಅಸಾಧ್ಯ. ಭಗವಂತನ ಬಗೆಗೆ ಅವನೇ ಹೇಳಬೇಕು ಹೊರತು ಇನ್ನೊಬ್ಬರು ಅದನ್ನು ವರ್ಣಿಸಲು ಸಾಧ್ಯವಿಲ್ಲ. ಭಗವಂತನನ್ನು ಪೂರ್ಣ ತಿಳಿಯುವುದು ಹಾಗಿರಲಿ, ಆತನ ಒಂದು ಅವತಾರವನ್ನು, ಅವತಾರದಲ್ಲಿನ ಆತನ ಒಂದು ಲೀಲೆಯನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಕಷ್ಟ.  ಕೃಷ್ಣ ತನ್ನ ಅವತಾರದಲ್ಲಿ ನಡೆದುಕೊಂಡ ರೀತಿ ನಮಗೆ ಅರ್ಥವಾಗುವುದಿಲ್ಲ. ನಮಗೆ ಅದು ವಿಚಿತ್ರ ಎನಿಸುತ್ತದೆ. ಆತನನ್ನು ಅರಿಯುವುದು ಅಷ್ಟು ಸುಲಭದ ಕೆಲಸವಲ್ಲ. ಆತನ ಒಂದೊಂದು ನಡೆಯ ಹಿಂದೆ ಒಂದೊಂದು ಸಂದೇಶವಿದೆ.

Sunday, August 28, 2011

Bhagavad geeta Kannada Chapter-10 Shloka 10-11


ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್
ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ ೧೦

ತೇಷಾಮ್  ಸತತ ಯುಕ್ತಾನಾಮ್  ಭಜತಾಮ್  ಪ್ರೀತಿ ಪೂರ್ವಕಮ್
ದದಾಮಿ ಬುದ್ಧಿಯೋಗಮ್  ತಮ್  ಯೇನ ಮಾಮ್ ಉಯಾಂತಿ ತೇ –ನನ್ನಲ್ಲೆ ಅನುಗಾಲ ಬಗೆಯಿಟ್ಟು ಪ್ರೀತಿಯಿಂದ ಸೇವಿಸುವವರಿಗೆ ಆ ತಿಳಿವಿನ ದಾರಿಯನ್ನು ಕರುಣಿಸುತ್ತೇನೆ. ಅದರಿಂದ ಅವರು ನನ್ನನ್ನೆ ಸೇರುತ್ತಾರೆ.

ಈ ಶ್ಲೋಕದಲ್ಲಿ  “ಸತತಯುಕ್ತಾನಾಂ” ಎನ್ನುವಲ್ಲಿ ಬರುವ ‘ಯುಕ್ತಿ’ ಎನ್ನುವ ಶಬ್ದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥಗಳಿವೆ. ಬಹಳ ಯೋಗ್ಯವಾದ ಆಚಾರನಿಷ್ಠೆ ಹೊಂದಿ, ದಾರಿತಪ್ಪದೆ, ಜಾರದೆ ಬದುಕುವುದು ಯುಕ್ತಿ. ಭಗವಂತನ ಅನುಸಂಧಾನಕ್ಕೆ ಪೂರಕವಾದ ವೇದಾಧ್ಯಯನವನ್ನು ಗ್ರಹಿಸುವುದು ಯುಕ್ತಿ. ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವುದು ಯುಕ್ತಿ. ಇಲ್ಲಿ ಕೃಷ್ಣ ಹೇಳುತ್ತಾನೆ: “ಯಾವ ಬುದ್ಧಿಯೋಗದಿಂದ ಭಗವಂತನನ್ನು ಸೇರುವುದು ಸಾಧ್ಯವೋ ಅಂತಹ  ವಿಷಯ ಚಿಂತನೆ ಮಾಡುವ ಮನಸ್ಸು, ಭಕ್ತಿಯಿಂದ ಚಿಂತನೆ ಮಾಡಬೇಕು ಎನ್ನುವ ಬುದ್ಧಿ, ನಿಶ್ಚಯವಾದ ಜ್ಞಾನವನ್ನು-ನಾನೇ ಕೊಡುತ್ತೇನೆ” ಎಂದು. ಭಗವಂತನಲ್ಲಿ ಶರಣಾಗಿ ಪ್ರೀತಿಯಿಂದ ಅವನನ್ನು ಸೇವಿಸಿದಾಗ-ಭಗವಂತನನ್ನು ಸೇರುವ ಮಾರ್ಗವನ್ನು ಭಗವಂತನೇ ತೋರಿಸುತ್ತಾನೆ.

ತೇಷಾಮೇವಾನುಕಂಪಾರ್ಥಮಹಮಜ್ಞಾನಜಂ ತಮಃ
ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ       ೧೧

ತೇಷಾಮ್ ಏವ ಅನುಕಂಪಾರ್ಥಮ್ ಅಮ್ ಅಜ್ಞಾನ ಮ್  ತಮಃ
ನಾಶಯಾಮಿ ಆತ್ಮ ಭಾವ ಸ್ಥ  ಜ್ಞಾನ ದೀಪೇನ ಭಾಸ್ವತಾ –ನಾನು ಅವರ ಮೇಲಣ ಕನಿಕರದಿಂದಲೆ, ಅವರ ಬಗೆಯಲ್ಲಿ ನೆಲೆನಿಂತು, ಬೆಳಗುವ ಅರಿವಿನ ಪಂಜಿನಿಂದ ಅಜ್ಞಾನದಿಂದ ಕವಿದ ಕತ್ತಲನ್ನು ಹೋಗಲಾಡಿಸುತ್ತೇನೆ.

ಭಗವಂತ ನಮ್ಮನ್ನು ಉದ್ಧರಿಸುವುದು ಯಾವುದೋ ಸ್ವಾರ್ಥಕ್ಕಾಗಿ ಅಲ್ಲ. ಬದಲಿಗೆ ನಮ್ಮ ಮೇಲಿನ ಕರುಣೆಯಿಂದ. ತನ್ನನ್ನು ಅನನ್ಯ ಭಕ್ತಿಯಿಂದ ಭಜಿಸಿ ಆರಾಧನೆ ಮಾಡುವ ಭಕ್ತನ ಮೇಲಿನ ಅನುಕಂಪದಿಂದ ಆತ ನಮ್ಮನ್ನು ಉದ್ಧರಿಸುತ್ತಾನೆ. ಆತ ನಮಗೆ ಕೇವಲ ಬುದ್ಧಿ ಕೊಡುವುದಷ್ಟೇ ಅಲ್ಲ, ನಮ್ಮ ಬುದ್ಧಿಯನ್ನು ಸದಾ ಕವಿದಿರುವ ತಮಸ್ಸಿನ(ಅಜ್ಞಾನದ) ಪೊರೆಯನ್ನು ಕಳಚುವವನೂ ಅವನೆ. ಭಗವಂತನ ಸಹಾಯವಿಲ್ಲದೆ ನಮ್ಮ ಮನಸ್ಸು-ಬುದ್ಧಿಗೆ ಕವಿದಿರುವ ಅಜ್ಞಾನದ ಪೊರೆಯನ್ನು ನಾವೇ ನೀಗಿಸಿಕೊಳ್ಳಲು ಸಾಧ್ಯವಿಲ್ಲ. ತ್ರಿಗುಣಾತೀತ ಭಗವಂತನೊಬ್ಬನೆ ಈ ಕತ್ತಲನ್ನು ಕಳೆಯಬಲ್ಲ. ಇದರಿಂದ ನಾವು ಯಥಾರ್ಥವನ್ನು ಯಥಾರ್ಥವಾಗಿ ಗ್ರಹಣ ಮಾಡಬಹುದು. ಭಗವಂತ ನಮ್ಮ ಭಾವದಲ್ಲಿ-ಭಕ್ತಿಯಲ್ಲಿ ತುಂಬಿ, ನಮ್ಮ  ಸ್ವರೂಪ ಜಾಗೃತಗೊಳಿಸಿ, ಕೃಪೆಯ ದೃಷ್ಟಿ ಬೀರಿ, ಎಲ್ಲ ವಿಧದಿಂದ ಬೆಳಕು ನೀಡಿ, ಯಥಾರ್ಥವನ್ನು ಕಾಣುವಂತೆ ಮಾಡುತ್ತಾನೆ. ಇದಕ್ಕಾಗಿ  ‘ನನ್ನೊಳಗಿನ ಕತ್ತಲನ್ನು ನೀಗು ಭಗವಂತ’ ಎಂದು ನಾವು ಆತನಲ್ಲಿ ಶರಣಾಗಬೇಕು. ಒಳಗೆ ಕತ್ತಲನ್ನು ಇಟ್ಟುಕೊಂಡು ಎಷ್ಟು ಅಧ್ಯಯನ ಮಾಡಿದರೂ ಉಪಯೋಗವಿಲ್ಲ. ಶಾಸ್ತ ಓದಿದಾಗ ಯಥಾರ್ಥ ತಿಳಿಯಬೇಕಾದರೆ ಭಗವಂತನಲ್ಲಿ ಶರಣಾಗತಿ ಮುಖ್ಯ.

ಈ ಹಂತದಲ್ಲಿ ಅರ್ಜುನ ಕೃಷ್ಣನ ಉಪದೇಶ ಕೇಳಿ ಮೈಮರೆತು ಹೋದ. ಆತನಿಗೆ ತಾನು ಯುದ್ಧರಂಗದಲ್ಲಿ ನಿಂತಿದ್ದೇನೆ ಎನ್ನುವ ವಿಚಾರವೇ ಮರೆತು ಹೋಗಿ, ಕೇವಲ ಕೃಷ್ಣನೊಬ್ಬನೆ ಕಾಣಲಾರಂಭಿಸುತ್ತಾನೆ. ಮುಂದಿನ ನಾಲ್ಕು ಶ್ಲೋಕದಲ್ಲಿ ಅರ್ಜುನ ಭಗವಂತನ ಅನಂತ ಶಕ್ತಿಯ ಪಾರಮ್ಯದ ಅನುಸಂಧಾನವನ್ನು ವ್ಯಕ್ತಪಡಿಸುವುದನ್ನು ಕಾಣುತ್ತೇವೆ.    

Saturday, August 27, 2011

Bhagavad Geeta Kannada Chapter-10 Shloka 6-9


ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ
ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ

ಮಹರ್ಷಯಃ ಸಪ್ತ ಪೂರ್ವೇ ಚತ್ವಾರಃ  ಮನವಃ ತಥಾ
ತ್ ಭಾವಾಃ  ಮಾನಸಾಃ  ಜಾತಾಃ  ಯೇಷಾಮ್  ಲೋಕೇ ಇಮಾಃ ಪ್ರಜಾಃ –-ಮೊದಲ ಮನ್ವಂತರದ ಏಳು ಮಂದಿ ಮಹರ್ಷಿಗಳು [ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ ], ಮೊದಲ ನಾಲ್ವರು ಮನುಗಳು [ಸ್ವಾಯಂಭುವ, ಸ್ವಾರೋಚಿಷ, ಉತ್ತಮ ಮತ್ತು ರೈವತ], ಚತುರ್ಮುಖನ ಮಾನಸ ಪುತ್ರರಾದ ಇವರು ನನ್ನಿಂದಲೆ ಆದವರು.[ನಾಲ್ಕು ವರ್ಣಗಳ ನಿಯಾಮಕರಾಗಿ ನಾಲ್ಕು ಪಂಗಡದಲ್ಲಿ ಸೇರಿದ, ವಿಶೇಷ ಅರಿವಿನ ಕಾರಣ ‘ಮನು’ಗಳೆನಿಸಿದ ಎಲ್ಲ ದೇವತೆಗಳು ನನ್ನಿಂದಲೆ ಆದವರು; ನನ್ನ ಇಚ್ಛೆಯಿಂದಲೆ ಹುಟ್ಟಿ ಬಂದವರು.] ವಿಶ್ವದ ಈ ಜನರೆಲ್ಲ ಅವರದೇ ಸಂತತಿ.

ಇಡೀ ಬ್ರಹ್ಮಾಂಡ ಸೃಷ್ಟಿ ಭಗವಂತನಿಂದಾಯಿತು ಎನ್ನುವುದು ನಮಗೆ ತಿಳಿದಿದೆ. ಇಲ್ಲಿ ಕೃಷ್ಣ ನಾವು ಉಪಾಸನೆಯಲ್ಲಿ ತಿಳಿದಿರಬೇಕಾದ ಮುಖ್ಯ ಅಂಶವನ್ನು ವಿವರಿಸುತ್ತಾನೆ. ಮೊದಲ ಮನ್ವಂತರದ ಸಪ್ತರ್ಷಿಗಳು ಮತ್ತು ಮೊದಲ ನಾಲ್ಕು ಮನುಗಳನ್ನು ಕೃಷ್ಣ ಇಲ್ಲಿ ಪ್ರಸ್ತಾಪಿಸಿದ್ದಾನೆ. ಪ್ರತಿಯೊಂದು ಮನ್ವಂತರಕ್ಕೂ ಬೇರೆ ಬೇರೆ ಸಪ್ತರ್ಷಿಗಳಿದ್ದಾರೆ. ದೇವತಾ ತಾರತಮ್ಯದಲ್ಲಿ ಹದಿನಾರನೇ ಕಕ್ಷೆಯಲ್ಲಿ ಬರುವ ಮೊದಲ ಮನ್ವಂತರದ ಈ ಸಪ್ತರ್ಷಿಗಳು ಋಷಿಮಂಡಲದಲ್ಲೇ ಬಹಳ ಶ್ರೇಷ್ಠರು. ಪುರಾಣ ಮತ್ತು ಮಹಾಭಾರತದ ಮೋಕ್ಷಧರ್ಮ ಪರ್ವವನ್ನು ನೋಡಿದಾಗ-ಇಲ್ಲಿ “ಮಹರ್ಷಯಃ ಸಪ್ತ ಪೂರ್ವೇ” ಎನ್ನುವುದು ಸೃಷ್ಟಿಕಾರಣನಾದ ಚತುರ್ಮುಖನಿಗೆ ಸಹಾಯಕರಾದ ಸಪ್ತಬ್ರಹ್ಮರನ್ನೂ ಸೂಚಿಸುತ್ತದೆ ಎಂದು ತಿಳಿಯುತ್ತದೆ. [ಇಲ್ಲಿ ಉಪಲಕ್ಷಣವಾಗಿ ಭೃಗು ಮತ್ತು ದಕ್ಷರನ್ನೂ ಸೇರಿಸಿಕೊಳ್ಳಬೇಕು. ಹತ್ತನೆಯವನಾದ ಮಾನಸ ಪುತ್ರ ನಾರದ ಬ್ರಹ್ಮಚಾರಿ ಆದ್ದರಿಂದ ಸೃಷ್ಟಿ ವಿಸ್ತಾರದಲ್ಲಿ ಆತನ ಹೆಸರನ್ನು ಸೇರಿಸಿಲ್ಲ]. ಈ ಏಳುಮಂದಿ ಋಷಿಗಳು ಮತ್ತು ಭೃಗು-ದಕ್ಷರನ್ನು ಪ್ರಜಾಪತಿಗಳೆಂದು ಕರೆಯುತ್ತಾರೆ. ಭಗವಂತ ಚತುರ್ಮುಖನ ಸೃಷ್ಟಿ ಮಾಡಿ, ಅವನ ಮೂಲಕ ಸಪ್ತರ್ಷಿಗಳ ಸೃಷ್ಟಿ ಮಾಡಿದ. ಸೃಷ್ಟಿಯಲ್ಲಿ ಮಾನವರ ವಂಶವಿಸ್ತಾರ ಮೊದಲು ಸ್ವಾಯಂಭುವ ಮನುವಿನ ಮೂಲಕವಾಯಿತು. ಈತನಿಂದ ಮನು ವಂಶ ಬೆಳೆದುಬಂತು. ಈ ಎಲ್ಲಾ ಕಾರಣದಿಂದ ಮೊದಲ ನಾಲ್ಕು ಮನ್ವಂತರದ ಅಧಿಪತಿಗಳು ಮತ್ತು ಸಪ್ತರ್ಷಿಗಳು ಪ್ರಧಾನವಾಗಿ ಉಪಾಸನೆಯಾಗಬೇಕಾದ ಹಿಂದಿನವರು. ವಿಶ್ವದ ಈ ಜನರೆಲ್ಲ ಅವರದೇ ಸಂತತಿ.
‘ಮನು’ ಎನ್ನುವುದಕ್ಕೆ ಇನ್ನೊಂದು ಅರ್ಥವಿದೆ. ಭಗವಂತನ ಪರಿವಾರವಾದ ದೇವತೆಗಳನ್ನೂ ‘ಮನುಗಳು’ ಎನ್ನುತ್ತಾರೆ. ತತ್ವಾಭಿಮಾನಿ ದೇವತೆಗಳಲ್ಲಿ ಮುಖ್ಯವಾಗಿ ನಾಲ್ಕು ವಿಧ. ಇವರು ಮನುಷ್ಯನ ನಾಲ್ಕು ಸ್ವಭಾವವನ್ನು(ಬ್ರಾಹ್ಮಣ್ಯ, ಕ್ಷಾತ್ರ, ವೈಶ್ಯ, ಶೂದ್ರ) ನಿಯಂತ್ರಿಸುವ ದೇವತೆಗಳು. ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಈ ನಾಲ್ಕು ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಿದೆ ನಾವು ಆ ವರ್ಗದಿಂದ ಕರೆಸಿಕೊಳ್ಳುತ್ತೇವೆ. ಇದಲ್ಲದೆ ‘ಮನು’ ಶಬ್ದವಾಚ್ಯ  ಜೀವವರ್ಗ ನಾಲ್ಕು: ಸಮಸ್ತ ದೇವತೆಗಳು, ದೇವತೆಗಳಿಂದ ಸೃಷ್ಟಿಯಾದ ಋಷಿಗಳು(ಮಾನವರು), ಋಷಿಪರಂಪರೆಯಿಂದ ಬಂದ ‘ಮಾನವಮಾನವರು’, ಈ ಪರಂಪರೆಯಿಂದ ಬಂದ ಮನುಷ್ಯರು. ಇದು ಉಪಾಸನೆಯಲ್ಲಿ ತಿಳಿದಿರಬೇಕಾದ ಅಂಶ.       

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ
ಸೋSವಿಕಲ್ಪೇನ   ಯೋಗೇನ ಯುಜ್ಯತೇ ನಾತ್ರ ಸಂಶಯಃ  

ಏತಾಮ್  ವಿಭೂತಿಮ್  ಯೋಗಮ್  ಚ ಮಮ ಯಃ  ವೇತ್ತಿ ತತ್ತ್ವತಃ
ಸಃ ಅವಿಕಲ್ಪೇನ  ಯೋಗೇನ ಯುಜ್ಯತೇ ನ ಅತ್ರ ಸಂಶಯಃ -ನನ್ನ ಈ ಹಿರಿಮೆಯನ್ನು [ಸನ್ನಿಧಾನದಿಂದ ಹಿರಿಮೆಯನ್ನೀಯುವ ನನ್ನ ರೂಪಗಳ ಬಗೆಯನ್ನು] ಮತ್ತು ಆಳವನ್ನು ಸರಿಯಾಗಿ ತಿಳಿದವನು ಪರಿಶುದ್ಧವಾದ ಧ್ಯಾನಯೋಗದಲ್ಲಿ ನೆಲೆಗೊಳ್ಳುತ್ತಾನೆ. ಇದರಲ್ಲಿ ಸಂದೇಹವಿಲ್ಲ.

ಭಗವಂತನ ಹಿರಿಮೆಯನ್ನು, ಆತನ ವಿವಿಧ ರೂಪವನ್ನು, ಅದರ ಆಳವನ್ನು-ಯಥಾರ್ಥವಾಗಿ ತಿಳಿದರೆ ನಮಗೆ  ಸಹಜವಾಗಿ ಶರಣಾಗತಿ ಬರುತ್ತದೆ. ಭಗವಂತನ ಬಗೆಗಿನ ಜ್ಞಾನ ನಮ್ಮಲ್ಲಿ  ದೃಢನಂಬಿಕೆಯನ್ನು ಹುಟ್ಟಿಸುತ್ತದೆ. ಶ್ರದ್ಧೆ  ಮತ್ತು ಭಕ್ತಿಯಿಂದ ತುಂಬಿದ ಮನಸ್ಸು ಭಗವಂತನಲ್ಲಿ ನೆಲೆನಿಲ್ಲುತ್ತದೆ.     

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ
ಇತಿ ಮತ್ವಾ ಭಜಂತೇ  ಮಾಂ ಬುಧಾ ಭಾವಸಮನ್ವಿತಾಃ     

ಅಹಮ್  ಸರ್ವಸ್ಯ ಪ್ರಭವಃ  ಮತ್ತಃ ಸರ್ವಮ್  ಪ್ರವರ್ತತೇ
ಇತಿ ಮತ್ವಾ ಭಜಂತೇ  ಮಾಮ್  ಬುಧಾಃ  ಭಾವ ಸಮನ್ವಿತಾಃ –-ತಿಳಿದವರು ‘ನಾನು ಎಲ್ಲದರ ಮೂಲಕಾರಣ, ನನ್ನಿಂದಲೆ ಎಲ್ಲವೂ ನಡೆಯುತ್ತಿದೆ’ ಎಂದರಿತು ಭಕ್ತಿಯಿಂದ ನನ್ನನ್ನು ಸೇವಿಸುತ್ತಾರೆ.

 ಜ್ಞಾನಿಗಳು ‘ಎಲ್ಲದರ ನಿಯಾಮಕ ಭಗವಂತ, ಎಲ್ಲವೂ ಭಗವಂತನಿಂದ ಸೃಷ್ಟಿಯಾಗಿದೆ, ಎಲ್ಲವೂ ಭಗವಂತನಿಂದ ನಿಯತವಾಗಿದೆ’ ಎನ್ನುವ  ಸತ್ಯವನ್ನು ಅರಿತು ಭಕ್ತಿಯಿಂದ  ಉಪಾಸನೆ ಮಾಡುತ್ತಾರೆ.  “ಈ ರೀತಿ ಭಗವಂತನ ಬಗೆಗೆ ಅನನ್ಯ ಭಕ್ತಿ ಮತ್ತು ಸರ್ವೋತ್ತಮ ಜ್ಞಾನವುಳ್ಳವರು: ತಮ್ಮೆಲ್ಲ  ಮನ್ಸಸ್ಸಿನ ಪ್ರಪಂಚ ನನ್ನ ಅಧೀನ, ಎಲ್ಲಕ್ಕೂ ಕಾರಣ ನಾನು, ಎಲ್ಲವೂ ಹುಟ್ಟಿದ್ದು ನನ್ನಿಂದ, ಎಲ್ಲವೂ ನಿಯಂತ್ರಿತವಾಗುವುದು ನನ್ನಿಂದ, ಎಲ್ಲವೂ ನನ್ನ ಅಧೀನ ಎಂದು ತಿಳಿದು ಉಪಾಸನೆ ಮಾಡುತ್ತಾರೆ” ಎನ್ನುತ್ತಾನೆ ಕೃಷ್ಣ.  

ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ  ಪರಸ್ಪರಮ್
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ

ತ್ ಚಿತ್ತಾಃ  ಮತ್ ಗತ ಪ್ರಾಣಾಃ ಬೋಧಯಂತಃ  ಪರಸ್ಪರಮ್
ಕಥಯಂತಃ ಚ  ಮಾಮ್  ನಿತ್ಯಮ್  ತುಷ್ಯಂತಿ ಚ ರಮಂತಿ –-ಅನುಗಾಲ ನನ್ನಲ್ಲೆ ಬಗೆಯಿಟ್ಟವರು , ನನಗಾಗಿ ಬದುಕುವವರು, ನನ್ನನ್ನೇ ಒಬ್ಬರಿಗೊಬ್ಬರು ತಿಳಿಹೇಳುತ್ತ,  ತಿಳಿಯುತ್ತ ತಣಿಯುತ್ತಾರೆ; ಸಂತಸಪಡುತ್ತಾರೆ.

ಹೀಗೆ ನಿಜವಾದ ಜ್ಞಾನ ಭಕ್ತಿ ಉಳ್ಳವರ ಚಿತ್ತದಲ್ಲಿ ಸದಾ ಭಗವಂತನ ಚಿಂತನವೇ ತುಂಬಿರುತ್ತದೆ. ಅವರ ಮನಸ್ಸು ಭಗವನ್ಮಯವಾಗಿ ಬಿಡುತ್ತದೆ. ಅವರಿಗೆ ಎಲ್ಲವುದರಲ್ಲೂ ಭಗವಂತನೇ ಕಾಣುತ್ತಾನೆ. ಇವರು ಪ್ರತೀ ಘಟನೆಯ ಹಿಂದೆ ಭಗವಂತನಿದ್ದಾನೆ, ಅವನ ಇಚ್ಛೆಯಂತೆ ಎಲ್ಲವೂ  ನೆಡೆಯತ್ತಿದೆ ಎನ್ನುವ ಅರಿವಿನಲ್ಲಿ ಬದುಕುತ್ತಾರೆ. ಇವರ ಮನಸ್ಸು ಭಗವಂತನಲ್ಲಿ ಶ್ರುತಿಗೂಡಿರುತ್ತದೆ. ಇವರು ಸದಾ ಭಗವಂತನ ಬಗೆಗೆ ಮಾತನಾಡುತ್ತಿರುತ್ತಾರೆ. ಒಂದೊಂದು ಸಂಗತಿಯಲ್ಲೂ  ‘ಭಗವಂತನ ಸೃಷ್ಟಿ ಎಷ್ಟು ಅದ್ಭುತ’ ಎನ್ನುವಂತೆ ಇವರು ವಿಶ್ಲೇಷಣೆ  ಮಾಡುತ್ತಾರೆ. ತಮ್ಮ ಜೀವನದ ಪ್ರತಿಯೊಂದು ಘಟನೆಯನ್ನೂ ಇವರು ಭಗವಂತನ ಪ್ರಸಾದ ಎನ್ನುವಂತೆ ಸ್ವೀಕರಿಸುತ್ತಾರೆ. ಇಂತವರ ಜೀವನ ಆನಂದಮಯವಾಗಿರುತ್ತದೆ. ಇವರಲ್ಲಿ ಕೆಟ್ಟ ಯೋಚನೆ ಸುಳಿಯುವುದಿಲ್ಲ. ಇವರ ಮನಸ್ಸು ಸದಾ ನಿರ್ಮಲವಾಗಿರುತ್ತದೆ. ಇವರು ಲೋಕ ವ್ಯವಹಾರದ ಮಾತನ್ನು  ಬಿಟ್ಟು, ಭಗವಂತನ ವಿಚಾರ ಮಾತನಾಡುತ್ತಾ ಸದಾ ಆನಂದಪಡುತ್ತಿರುತ್ತಾರೆ.

Tuesday, August 23, 2011

Bhagavad Geeta Kannada Chapter-10 Shloka 4-5


ಬುದ್ಧಿರ್ಜ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ      
ಸುಖಂ ದುಃಖಂ ಭವೋSಭಾವೋ ಭಯಂ ಚಾಭಯಮೇವ ಚ

ಬುದ್ಧಿಃ ಜ್ಞಾನಮ್ ಅಸಮ್ಮೋಹಃ ಕ್ಷಮಾ ಸತ್ಯಮ್  ದಮಃ ಶಮಃ          
ಸುಖಮ್  ದುಃಖಮ್  ಭವಃ ಅಭಾವಃ  ಭಯಮ್ ಚ ಅಭಯಮ್ ಏವ ಚ --ವಿವೇಕಃ[ಅಂತಃಕರಣ], ಅರಿವು, ಕೆಟ್ಟದ್ದನ್ನು ಮಾಡಬಯಸದಿರುವುದು, ತಪ್ಪಿಗನ ಮೇಲೂ ರೇಗದಿರುವುದು, ದಿಟದ ನಡೆ, ಇಂದ್ರಿಯಗಳ ಹಿಡಿತ, ಭಗವಂತನಲ್ಲಿ ನಿಷ್ಠೆ, ಸುಖ-ದುಃಖ, ಹುಟ್ಟು-ಸಾವು, ಪುಕ್ಕು-ಕೆಚ್ಚು ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ.

ಭಗವಂತನ ಉಪಾಸನೆಯಲ್ಲಿ ನಾವು ತಿಳಿದಿರಬೇಕಾದ ಮುಖ್ಯವಾದ ವಿಚಾರವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಮಗೆ ಬುದ್ಧಿ, ಜ್ಞಾನ, ಅಸಮ್ಮೋಹ, ಕ್ಷಮಾ, ಸತ್ಯಂ, ದಮಃ-ಶಮಃ -ಎಲ್ಲವನ್ನು ಕೊಡುವವನು ಆ ಭಗವಂತ. ಕೆಲವರಿಗೆ ತಾವು ತುಂಬಾ ಬುದ್ಧಿವಂತರು ಎನ್ನುವ ಭ್ರಮೆ ಇರುತ್ತದೆ. ಆದರೆ ಆ ಬುದ್ಧಿಶಕ್ತಿಯನ್ನು ಕರುಣಿಸುವವ ಭಗವಂತ ಎನ್ನುವ ಸತ್ಯವನ್ನು ಅವರು ತಿಳಿದಿರುವುದಿಲ್ಲ. ಕೃಷ್ಣ ಹೇಳುತ್ತಾನೆ: “ನಿನಗೆ ಬುದ್ಧಿ ಕೊಡುವವನೂ ನಾನು,  ಜ್ಞಾನ ಕೊಡುವವನೂ ನಾನು” ಎಂದು. ಇಲ್ಲಿ ‘ಜ್ಞಾನ’ ಎಂದರೆ ಒಂದು ವಸ್ತುವಿನ ಅರಿವು. ‘ಬುದ್ಧಿ’ ಎಂದರೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವ ವಿವೇಕ. ನಮ್ಮಲ್ಲಿ ಬುದ್ಧಿ ಮತ್ತು ಜ್ಞಾನ ಎರಡೂ ಇದ್ದಾಗ ಮಾತ್ರ ಅದು ಪೂರ್ಣ. ಜ್ಞಾನವಿದ್ದು ಬುದ್ಧಿ ಇಲ್ಲದಿದ್ದರೆ ವೇದ ನಮ್ಮಿಂದ ದೂರವಾಗುತ್ತದೆ. “ಆಚಾರ ಹೀನಂ ನ ಪುನಂತಿ ವೇದಾಃ”-ಒಬ್ಬ ಮನುಷ್ಯ ಆಚಾರ ಹೀನನಾಗಿದ್ದರೆ ಅವನನ್ನು ಎಲ್ಲ ವೇದಗಳೂ  ಕೈಬಿಡುತ್ತವೆ. ರೆಕ್ಕೆ ಬಲಿತ ಹಕ್ಕಿಮರಿಗಳು ತಮ್ಮ ಗೂಡನ್ನು ಬಿಟ್ಟು ಹಾರಿ ಹೋದಂತೆ ವೇದವಿದ್ಯೆ ಅವನನ್ನು ಬಿಟ್ಟು ಹಾರಿ ಹೋಗುತ್ತದೆ. ಆಚಾರವಂತನಾಗಿರಬೇಕು ಎಂದು ತಿಳಿದಿರುವುದು ಜ್ಞಾನ. ಆದರೆ ಯಾವುದು ಆಚಾರ-ಯಾವುದು ಅನಾಚಾರ ಎನ್ನುವ ವಿವೇಕ ಪ್ರಜ್ಞೆ-ಬುದ್ಧಿ. ಬುದ್ಧಿ-ಜ್ಞಾನದ ಜೊತೆಗೆ  ಯಾವುದೇ ಸಂಶಯವಿಲ್ಲದೆ ಸತ್ಯವನ್ನು ತಿಳಿಯುವ  ಗ್ರಹಣಶಕ್ತಿ ‘ಅಸಮ್ಮೋಹ’. ಇವು ಬದುಕಿನಲ್ಲಿ ನಮಗೆ ಆಸರೆಯಾಗಿರುವ  ಮೂರು ಮುಖ್ಯ ಆಧಾರಸ್ಥಂಭಗಳು. ನಾವು ಇದನ್ನು ತಿಳಿದು ಆ ಭಗವಂತನನ್ನು ಉಪಾಸನೆ ಮಾಡಬೇಕು.
ನಾಲ್ಕನೇ ಗುಣ ‘ಕ್ಷಮಾ’. ಇದು ಅತ್ಯಂತ ದೊಡ್ಡ ಗುಣ. ಯಾರಾದರು ನಮ್ಮನ್ನು ಟೀಕೆ ಮಾಡಿದರೆ- ಆ ಟೀಕೆಯಲ್ಲಿ ನಮ್ಮನ್ನು ನಾವು ತಿದ್ದಿಕೊಳ್ಳುವ ಅಂಶ ಇದ್ದರೆ ತಿದ್ದಿಕೊಳ್ಳುವುದು, ಇಲ್ಲದೆ ಅದು ಕೇವಲ ಅಸೂಯೆಯ ಟೀಕೆಯಾಗಿದ್ದರೆ ಯಾವುದೇ ಪ್ರತಿಕಾರವಿಲ್ಲದೆ ವಿಷಯವನ್ನು ಅಲ್ಲೇ ಬಿಟ್ಟುಬಿಡುವುದು ‘ಕ್ಷಮಾ’.
ಐದನೇ ಗುಣ ‘ಸತ್ಯಂ’. ಸತ್ಯಮ್  ಎಂದರೆ ಪ್ರಾಮಾಣಿಕತೆ. ಇಂದು ನಾವು ಸಜ್ಜನಿಕೆಯನ್ನು ಮರೆತು ಸಜ್ಜೆನಿಕೆಯ ಮುಖವಾಡದಲ್ಲಿ ಬದುಕುತ್ತಿದ್ದೇವೆ. ಅಪ್ರಮಾಣಿಕತೆ ಎನ್ನುವುದು ನಮ್ಮ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಪ್ರಾಮಾಣಿಕತೆ ಇಲ್ಲದೆ ಯಾವ ಆಚಾರ ಸಂಪತ್ತಿದ್ದರೂ ಉಪಯೋಗವಿಲ್ಲ. ಒಬ್ಬ ವ್ಯಕ್ತಿಯ ಎದುರೊಂದು ಮತ್ತು ಹಿಂದೊಂದು ಮಾತನಾಡುವುದು ಅಪ್ರಮಾಣಿಕತೆ. ನಮಗೆ ಇನ್ನೊಬ್ಬ ವ್ಯಕ್ತಿಯ ವಿಚಾರ ಇಷ್ಟವಾಗದೆ ಇದ್ದಲ್ಲಿ ಅವರಿಗೆ ಅದನ್ನು ನೇರವಾಗಿ ಹೇಳಬಹುದು ಅಥವಾ ಅವರಿಂದ ದೂರವಿರಬೇಕು. ನಮ್ಮಲ್ಲಿ ಪ್ರಾಮಾಣಿಕತೆ ಎಲ್ಲಿಯ ತನಕ ಬೆಳೆಯುವುದಿಲ್ಲವೋ ಅಲ್ಲಿಯ ತನಕ ಯಾವ ಶಾಸ್ತ್ರವೂ ನಮ್ಮನ್ನು ಉದ್ಧಾರ ಮಾಡುವುದಿಲ್ಲ. ನಾವು ನಮಗೆ ಇಂತಹ ಪ್ರಾಮಾಣಿಕತೆ ಕೊಡು ಎಂದು ಭಗವಂತನನ್ನು ಉಪಾಸನೆ ಮಾಡಬೇಕು.
ಆರನೆಯದಾಗಿ ದಮಾಃ. ಇದು ಇಂದ್ರಿಯಗಳಿಗೆ ಸಂಬಂಧಪಟ್ಟಿದ್ದು. ನಮ್ಮ ಇಂದ್ರಿಯಗಳು ನಾವು ಹೇಳಿದಂತೆ ಕೇಳುವುದಿಲ್ಲ. ಅವು ನಮ್ಮನ್ನು ಬೇಡದ ಕಡೆ ಸೆಳೆಯುತ್ತವೆ. ಇದರಿಂದ ನೋಡಬಾರದ್ದನ್ನು ನೋಡುವುದು, ಆಡಬಾರದ್ದನ್ನು ಆಡುವುದನ್ನು ನಾವು ಮಾಡುತ್ತೇವೆ. ಇಂತಹ ಇಂದ್ರಿಯನಿಗ್ರಹ ದಮಾಃ. ಇಂದ್ರಿಯ ನಿಗ್ರಹಕ್ಕೆ ಇರುವ ಏಕಮಾತ್ರ ಮಾರ್ಗ ಭಗವಂತನಲ್ಲಿ ಶರಣಾಗತಿ.
ಏಳನೆಯ ಗುಣ ಶಮಾಃ. ನಮ್ಮ ಮನಸ್ಸು ಶಾಂತವಾಗಿರುವುದು(to be in blissfull state) ಶಮಾಃ. ಇಂದು ನಾವೆಲ್ಲರೂ ಬದುಕುತ್ತಿರುವುದು ಅಶಾಂತಿ(Tension)ಯಿಂದಲೇ! ಇದಕ್ಕೆ ಮೂಲ ಕಾರಣ ನಾವು ನಮ್ಮ ಮನಸ್ಸನ್ನು ಲೌಕಿಕ ವಿಚಾರದಲ್ಲಿ ಕೇಂದ್ರೀಕರಿಸಿ ಸಾಗುತ್ತಿರುವುದು. ಲೌಕಿಕ ವಿಚಾರವನ್ನು ಬಿಟ್ಟು, ಮನಸ್ಸನ್ನು ಭಗವಂತನ ಕಡೆಗೆ ಹರಿಸಿದಾಗ ಮನಸ್ಸು ಹಾಯಾಗುತ್ತದೆ. ಜೀವನದಲ್ಲಿ ಸಮಸ್ಯೆ ಬಂದರೆ “ದೇವರಿದ್ದಾನೆ, ಆತ ಬಿಟ್ಟು ಹಾಕುವುದಿಲ್ಲ” ಎನ್ನುವ ದೃಢನಂಬಿಕೆ ಉಳ್ಳವ ಈ ಸ್ಥಿತಿಯನ್ನು ಗಳಿಸಬಲ್ಲ. ಒಟ್ಟಿನಲ್ಲಿ 'ನಮ್ಮ ಒಳಪ್ರಪಂಚದ ಸರ್ವಸ್ವವೂ ಭಗವಂತ ಎನ್ನುವ ಪರಿಜ್ಞಾನದಿಂದ ನಾವು ಉಪಾಸನೆ ಮಾಡಬೇಕು'-ಎನ್ನುವುದು ಇಲ್ಲಿರುವ ಮೂಲ ಸಂದೇಶ.
ಮುಂದುವರಿದು ಕೃಷ್ಣ ಹೇಳುತ್ತಾನೆ: “ಸುಖ-ದುಃಖ, ಹುಟ್ಟು-ಸಾವು, ಪುಕ್ಕು-ಕೆಚ್ಚು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ” ಎಂದು. ಸುಖ-ದುಃಖ ಎನ್ನುವುದು ದ್ವಂದ್ವ. ಜೀವನದಲ್ಲಿ ಇವೆರಡೂ ಒಟ್ಟಿಗೇ ಇರುತ್ತವೆ ಮತ್ತು  ಒಂದರ ನಂತರ ಒಂದು ಬರುತ್ತಿರುತ್ತವೆ. ಯಾರಿಗೂ ಸುಖವಿಲ್ಲದ ದುಃಖವಾಗಲಿ, ದುಃಖವಿಲ್ಲದ ಸುಖವಾಗಲಿ ಇಲ್ಲ. ಇದು ನಮ್ಮ ಜೀವನದಲ್ಲಿ ಹಗಲು-ರಾತ್ರಿ ಇದ್ದಂತೆ. ಈ ಸತ್ಯವನ್ನು ತಿಳಿದಾಗ ದುಃಖವೆನ್ನುವುದು ದುರ್ಬರವಾಗದು. ನಮ್ಮ ಜೀವನದಲ್ಲಿ ಏರಿಳಿತ ಎನ್ನುವುದು ಸಾಮಾನ್ಯ. ಹುಟ್ಟು-ಸಾವು ನೈಸರ್ಗಿಕ. ನಮ್ಮಲ್ಲಿ ಜ್ಞಾನವಿದ್ದರೆ ಅದೇ ಅಭಯ, ಇಲ್ಲದಿದ್ದರೆ ಭಯ. ಇವೆಲ್ಲವೂ ಭಗವಂತನ ಅಧೀನ.

ಹೀಗೆ ಈ ಶ್ಲೋಕದಲ್ಲಿ ಮನುಷ್ಯನ ಮನಸ್ಸಿನಲ್ಲಿ ಮೂಡುವ ಎಲ್ಲಾ ಭಾವನೆಗಳು-ಆ ಭಾವನೆಗಳಿಂದ ಆಗತಕ್ಕ ಎಲ್ಲಾ ಪರಿವರ್ತನೆ ಮತ್ತು ಪರಿಣಾಮಗಳು-ಎಲ್ಲದರ ಹಿಂದಿರುವ ಭಗವತ್ ಶಕ್ತಿ ಬಗ್ಗೆ ಕೃಷ್ಣ ವಿವರಿಸಿದ. ಮುಂದಿನ ಶ್ಲೋಕದಲ್ಲಿ ಕೃಷ್ಣ ನಾವು ಗಳಿಸಿಕೊಳ್ಳಬೇಕಾದ ಏಳು ಮಾನಸಿಕ ಗುಣವನ್ನು ವಿವರಿಸುತ್ತಾನೆ.

ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋSಯಶಃ   
ವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ ವಿಧಾಃ

ಅಹಿಂಸಾ ಸಮತಾ ತುಷ್ಟಿಃ ತಪಃ (ಅ)ದಾನಮ್  ಯಶಃ ಅಯಶಃ       
ವಂತಿ ಭಾವಾಃ  ಭೂತಾನಾಮ್  ಮತ್ತಃ ಏವ ಪೃಥಕ್  ವಿಧಾಃ -- ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, ದಾನ, ಹೆಸರು, ಕೆಟ್ಟ ಹೆಸರು- ಬಗೆ ಬಗೆಯ ಈ ಎಲ್ಲ ಬಗೆಗಳೂ ನನ್ನಿಂದಲೆ ಉಂಟಾಗುತ್ತವೆ.

ಕೃಷ್ಣ ಹೇಳುತ್ತಾನೆ “ಅಹಿಂಸೆ, ಸಮದೃಷ್ಟಿ, ತೃಪ್ತಿ, ತಪಸ್ಸು, (ಅ)ದಾನ, ಹೆಸರು, ಕೆಟ್ಟ ಹೆಸರು” ಇವು ನನ್ನಿಂದ ಎಂದು. ಇಲ್ಲಿ ಅಹಿಂಸೆ ಮತ್ತು ಸಮದೃಷ್ಟಿ ತುಂಬಾ ವಿಶೇಷವಾದುದ್ದು. ಏಕೆಂದರೆ ಹಿಂಸೆಯೂ ಕೆಲವೊಮ್ಮೆ ಅಹಿಂಸೆಯಾಗುತ್ತದೆ  ಮತ್ತು ಅಸಮಾನತೆಯೂ ಸಮಾನತೆಯಾಗುತ್ತದೆ. ಅದಕ್ಕಾಗಿ ಇದನ್ನು ಇಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದಾನೆ ಕೃಷ್ಣ.
ಮೊದಲಿಗೆ ಅಹಿಂಸೆ: ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದು ಅಹಿಂಸೆ. ಇಲ್ಲಿ ಅಹಿಂಸೆ ಎಂದರೆ ಕೇವಲ ಶಾರೀರಿಕವಾಗಿ ಮಾತ್ರವಲ್ಲ, ಮನಸ್ಸು ಮತ್ತು ಮಾತಿನಲ್ಲೂ ನಾವು ಅಹಿಂಸೆಯನ್ನು ಸಾಧಿಸಬೇಕು. ಉದಾಹರಣೆಗೆ: ಒಬ್ಬರನ್ನು ಚುಚ್ಚು ಮಾತಿನಿಂದ ಹಂಗಿಸುವುದು, ಮಾನಸಿಕವಾಗಿ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಶಾಪ ಹಾಕುವುದು ಕೂಡಾ ಹಿಂಸೆ. ಕೆಲವೊಮ್ಮೆ ಹಿಂಸೆಯೇ ಅಹಿಂಸೆಯಾಗುತ್ತದೆ. ಉದಾಹರಣೆಗೆ: ಒಂದು ನರಭಕ್ಷಕ ಹುಲಿಯನ್ನು ಕೊಲ್ಲುವುದರಿಂದ ಊರಿನ ಅನೇಕ ಜನರ ಪ್ರಾಣ ಉಳಿಯುವುದಾದರೆ ಅದನ್ನು ಕೊಲ್ಲುವುದು ಅಹಿಂಸೆ.[ನಾವು ಈ ರೀತಿಯ ಅಹಿಂಸೆಯನ್ನು ಕೃಷ್ಣನ ಅನೇಕ ಕೃತಿಗಳಲ್ಲಿ ಕಾಣುತ್ತೇವೆ]. ದೊಡ್ಡ ಹಿಂಸೆಯನ್ನು ತಡೆಯುವುದಕ್ಕೊಸ್ಕರ ಮಾಡುವ ಚಿಕ್ಕ ಹಿಂಸೆ-ಅಹಿಂಸೆ. ನಾವು ನಮ್ಮ ಮಾತಿನಿಂದ, ಕೃತಿಯಿಂದ ಮತ್ತು ಮನಸ್ಸಿನಿಂದ ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆದುಕೊಳ್ಳಬೇಕು.
ಎರಡನೆಯ ಗುಣ ಸಮದೃಷ್ಟಿ (ಸಮತಾಃ) : ಇಲ್ಲಿ ಸಮದೃಷ್ಟಿ ಎಂದರೆ ಎಲ್ಲರನ್ನೂ ಏಕ ರೂಪದಲ್ಲಿ ನೋಡುವುದು ಎಂದರ್ಥವಲ್ಲ. ಇದು ಯೋಗ್ಯತೆಗನುಗುಣವಾದ ಸಮದೃಷ್ಟಿ. ಉದಾಹರಣೆಗೆ: ಒಂದು ಶಾಲೆಯಲ್ಲಿ ಚನ್ನಾಗಿ ಓದಿ ಬರೆದ ವಿದ್ಯಾರ್ಥಿ ಹಾಗು ಓದದೆ ಪೋಲಿಯಾಗಿರುವ ಇನ್ನೊಬ್ಬ ವಿದ್ಯಾರ್ಥಿಗೆ ಸಮನಾದ ಅಂಕವನ್ನು ಕೊಡುವುದು ಸಮಾನತೆ ಅಲ್ಲ. ಯಾವುದೇ ದ್ವೇಷವಿಲ್ಲದೆ, ಶತ್ರು, ಮಿತ್ರ, ಸ್ಥಳೀಯ, ಪರಕೀಯ ಎನ್ನುವ ಭೇದವಿಲ್ಲದೆ, ಅವರವರ ಯೋಗ್ಯತೆಗೆ ತಕ್ಕಂತೆ ಅಂಕ ವಿತರಣೆ ಮಾಡುವುದು ಸಮಾನತೆ. ಯಾರನ್ನು ಹೇಗೆ ನೋಡಬೇಕೋ ಅವರನ್ನು ಹಾಗೆ ನೋಡುವುದು. ತಂದೆಯನ್ನು ತಂದೆಯಂತೆ, ತಾಯಿಯನ್ನು ತಾಯಿಯಂತೆ, ಗುರುವನ್ನು ಗುರುವಂತೆ ಹೀಗೆ ಯಾರು ಸಮಾನರೋ ಅವರನ್ನು ಸಮಾನವಾಗಿ ಗೌರವಿಸುವುದು ಸಮದೃಷ್ಟಿ.
ಮೂರನೆಯ ಗುಣ ತೃಪ್ತಿ: ಮನುಷ್ಯನ ಎಲ್ಲಾ ದುಃಖಗಳಿಗೆ ಮುಖ್ಯ ಕಾರಣ ಅತೃಪ್ತಿ. ಇಂದಿನ ಸಮಾಜದಲ್ಲಿ ನಮ್ಮ ಮನೆಯಲ್ಲಿ ನಮಗೆ ಅಗತ್ಯಕ್ಕೆ ಬೇಕಾದಷ್ಟು ಇದ್ದರೂ ಕೂಡ ಮಾಧ್ಯಮಗಳಲ್ಲಿ ಬರುವ ಜಾಹಿರಾತಿಗೆ ಮರುಳಾಗಿ, ಅಥವಾ ನೆರಮನೆಯವರಿಗೆ ಪ್ರತಿಸ್ಪರ್ಧಿಯಾಗಿ, ಸದಾ ಅತೃಪ್ತಿಯಲ್ಲಿ ನಾವು ಬದುಕುತ್ತೇವೆ. ಕೆಲಸ ಇಲ್ಲದಾಗ ಕೆಲಸದ ಆಸೆ, ನಂತರ ಎಷ್ಟು ಸಂಬಳ ಬಂದರೂ ಅಲ್ಲಿ ಅತೃಪ್ತಿ. ಇಲ್ಲದ್ದನ್ನು ಯೋಚಿಸಿ ಕೊರಗದೆ, ಇದ್ದದ್ದನ್ನು ಯೋಚಿಸಿ ಖುಷಿ ಪಡುವುದು(Be content with whatever you have) ನಿಜವಾದ ತೃಪ್ತಿ.
ನಾಲ್ಕನೆಯದು ತಪಸ್ಸು: ಇದರಲ್ಲಿ ಮೂರು ಬಗೆ:  ಕಾಯಾ-ವಾಚಾ-ಮನಸಾ ತಪಃ.  ಕಾಯ ಅಂದರೆ ದೇಹ. ದೇಹದ ಮೂಲಕ ತಪಸ್ಸು. ಸಾಮಾನ್ಯವಾಗಿ ದೇಹ ಹೇಳಿದಂತೆ ಕೇಳದೆ ಇರುವುದು ಆಹಾರ ಅತ್ಯಯ ಅಥವಾ ವ್ಯತ್ಯಯದಿಂದ. ಆಹಾರ ನಿಯಂತ್ರಣ ಮಾಡಿದಾಗ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ಮನಸ್ಸು ನಿಯಂತ್ರಣದಲ್ಲಿದ್ದರೆ ದೇಹ ಸ್ಥಿರವಾಗಿರಲು ಸಾಧ್ಯ. ಇದಕ್ಕಾಗಿ ನಾನಾ ರೀತಿಯ ನಿಯಂತ್ರಣ ಸಾಧನವಾದ ವೃತಾನುಷ್ಠಾನ ಮಾಡುವುದು. ಒಟ್ಟಿನಲ್ಲಿ ಅಹಂಕಾರ ಅಸೂಯೆ ಪಡದೆ ಬಗ್ಗುವ ಗುಣ ಬರುವುದು  ದೇಹದ ತಪಸ್ಸಿನಿಂದ. ಇನ್ನೊಬ್ಬರಿಗೆ ಹಿತವೆನಿಸುವ, ಸತ್ಯವಾದ-ಸಹಜ ಮಾತನ್ನಾಡುವುದು; ಶಾಸ್ತ್ರಗಳ ಶ್ರವಣ-ಮನನ ಮಾಡಿ ಅದರಿಂದ ಸ್ವಪ್ರವಚನ ಅಭ್ಯಸಿಸಿ ಅದನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ ಪ್ರವಚನ ಮಾಡಿ, ಮುಂದಿನ ತಲೆಮಾರಿಗೆ ಕೊಡುವುದು ವಾಚ-ತಪಃ. ಮಾನಸಿಕವಾಗಿ ಸದಾ ಆಳವಾದ ಚಿಂತನೆ ಮನಸಾ-ತಪಃ.
ಐದನೆಯದು (ಅ)ದಾನ: ದಾನ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥವಿದೆ. ಒಂದು ‘ಕೊಡುವುದು’ ಇನ್ನೊಂದು ‘ತುಂಡರಿಸುವುದು’. ಕೊಡುವುದರಿಂದ ಅದು ನಮ್ಮ ಪಾಪವನ್ನು ತುಂಡರಿಸಿದರೆ ಅದು ದಾನ. ಬದಲಿಗೆ ನಮ್ಮ ಪುಣ್ಯವನ್ನು ತುಂಡರಿಸಿದರೆ ಅದು ಅದಾನ.
ನಮಗೆ ಅನುಪಯುಕ್ತವಾದ ವಸ್ತುವನ್ನು ಸಾಗಹಾಕುವುದಕ್ಕೋಸ್ಕರ ಕೊಡುವ ದಾನ ದಾನವಲ್ಲ. ಅತೀ ಅಗತ್ಯವಾದ ವಸ್ತು ಇನ್ನೊಬ್ಬರಲ್ಲಿ ಇಲ್ಲದೆ ಅದು  ನಮ್ಮಲ್ಲಿ ಇದ್ದರೆ, ನಮ್ಮಲ್ಲಿರುವುದನ್ನು ಅವರಿಗೆ ಹಂಚಿ ಅವರ  ಕೊರತೆ ನೀಗಿಸುವುದು ನಿಜವಾದ ದಾನ. ಒಬ್ಬ ವ್ಯಕ್ತಿ ಒಂದು ಹೊತ್ತಿನ ಊಟಕ್ಕೆ ಗತಿ ಇಲ್ಲದೆ ಪರದಾಡುತ್ತಿರುವಾಗ ನಮ್ಮಲ್ಲಿ ಎರಡು ಹೊತ್ತಿನ ಊಟಕ್ಕಾಗುವಷ್ಟು ಧಾನ್ಯವಿದ್ದರೆ, ನಮ್ಮ ನಾಳೆಯ ಬಗ್ಗೆ ಯೋಚಿಸದೆ, ಆ ವ್ಯಕ್ತಿಗೆ ಒಂದು ಹೊತ್ತಿನ ಧಾನ್ಯವನ್ನು ದಾನ ಮಾಡುವುದು ನಿಜವಾದ ದಾನ.
ದಾನದಲ್ಲಿ ಅಶನ-ವಸನ-ಅನ್ನ ಇದನ್ನು ಯಾರಿಗೆ ಬೇಕಾದರೂ ದಾನ ಮಾಡಬಹುದು. ಇರುವುದಕ್ಕೆ ತಾಣ, ಉಡುವುದಕ್ಕೆ ಬಟ್ಟೆ, ಹಸಿದವನಿಗೆ ಅನ್ನ. ಇದನ್ನು ಕೊಡುವುದಕ್ಕೆ ಯೋಗ್ಯ-ಅಯೋಗ್ಯ ಎನ್ನುವ ನಿರ್ಬಂಧವಿಲ್ಲ. ಆದರೆ ಇತರೆ ವಸ್ತುವನ್ನು ದಾನ ಮಾಡುವಾಗ ಯಾವುದು ಯಾರಿಗೆ ಅಗತ್ಯ ಮತ್ತು ಯೋಗ್ಯ ಎಂದು ನೋಡಿ ದಾನ ಮಾಡಬೇಕು. ಪ್ರಚಾರಕ್ಕಾಗಿ ದಾನ ಮಾಡುವುದು-ಅದಾನ. ಯಾವುದೇ ಬಯಕೆ ಇಲ್ಲದೆ ನಿಷ್ಪೃಹತೆಯಿಂದ ಕರ್ತವ್ಯ ದೃಷ್ಟಿಯಿಂದ ಯೋಗ್ಯವಾದ ದೇಶದಲ್ಲಿ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ವ್ಯಕ್ತಿಗೆ ಮಾಡುವ ದಾನ ನಿಜವಾದ ದಾನ.
ಕೊನೆಯದಾಗಿ ಕೃಷ್ಣ ಶಃ-ಅಯಶಃವನ್ನು ಇಲ್ಲಿ ಹೇಳಿದ್ದಾನೆ. ಇದು ತುಂಬಾ ವಿಚಿತ್ರವಾದದ್ದು. ಒಬ್ಬ ಕೆಟ್ಟದ್ದನ್ನು ಮಾಡಿ ಒಳ್ಳೆಯವನು ಎಂದು ಯಶಸ್ಸನ್ನು ಗಳಿಸಬಹುದು. ಇನ್ನೊಬ್ಬ ಜೀವಮಾನವೆಲ್ಲ ಒಳ್ಳೆಯ ಕೆಲಸ ಮಾಡಿ ಬೇಡವಾದ ಅಪವಾದ ಕೇಳಿ ದುರಂತಕ್ಕೊಳಗಾಗಬಹುದು. ಇದು ತೀರ್ಮಾನವಾಗುವುದು ನಮ್ಮ ಜೀವನದ ನಡೆಯ ಮೇಲೆ. ಇದಕ್ಕಾಗಿ ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅಪವಾದ ಬಂದಾಗ ಹೇಗಿರಬೇಕು ಎನ್ನುವುದನ್ನು ಕೃಷ್ಣ ತನ್ನ ಜೀವನ ಕ್ರಮದಲ್ಲಿ ನಮಗೆ ತೋರಿಸಿಕೊಟ್ಟಿದ್ದಾನೆ. ಶಮಂತಕ ಮಣಿಯನ್ನು ಕೃಷ್ಣ ಕದ್ದ ಎನ್ನುವ ಅಪವಾದ ಕೃಷ್ಣನಿಗೆ ಬಂದಾಗ ಕೃಷ್ಣನ ನಡೆ ಇದಕ್ಕೆ ಉತ್ತಮ ದೃಷ್ಟಾಂತ.
ಹೀಗೆ “ಈ ಎಲ್ಲಾ ಭಾವಗಳು ಜೀವಜಾತಕ್ಕೆ ಬರುವುದು ನನ್ನಿಂದಲೆ” ಎನ್ನುತ್ತಾನೆ ಕೃಷ್ಣ. ಯಾರಿಗೆ ಯಾವ ಕಾಲದಲ್ಲಿ ಯಾವ ಭಾವ ಬರಬೇಕು ಅನ್ನುವುದು ಭಗವಂತನ ನಿರ್ಧಾರ. ನಮ್ಮ ಮನಸ್ಸಿನ ಸ್ಥಿತಿಯ ಒಂದೊಂದು ಚಲನ-ವಲನ ಭಗವಂತನ ಅಧೀನ. ಇದು ನಾವು ನಮ್ಮ  ಉಪಾಸನೆಯಲ್ಲಿ ತಿಳಿದಿರಬೇಕಾದ ಮೂಲಭೂತ ಸತ್ಯ. ಇದು ಕೃಷ್ಣ ಕೊಟ್ಟ ಮಾನಸಿಕ ಉಪಾಸನೆಯ ಅದ್ಭುತ ಚಿತ್ರಣ.     

Sunday, August 21, 2011

Bhagavad Geeta Kannada Chapter-10 Shloka 2-3


ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ           
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ      

ನ ಮೇ ವಿದುಃ ಸುರ ಗಣಾಃ ಪ್ರಭವಮ್  ನ ಮಹಾ ಋಷಯಃ
ಅಹಮ್ ಆದಿಃ ಹಿ ದೇವಾನಾಮ್  ಹಾ ಋಷೀಣಾಮ್  ಚ ಸರ್ವಶಃ –ನನ್ನ ಆಳವನ್ನು, [ನಾನು ಜಗವನ್ನು ನಿರ್ಮಿಸುವ ಬಗೆಯನ್ನು] ದೇವತೆಗಳಾಗಲಿ, ಮಹರ್ಷಿಗಳಾಗಲಿ, ಅಥವಾ ಇನ್ಯಾರೂ ತಿಳಿದಿಲ್ಲ. ದೇವತೆಗಳಿಗೆ, ಹಿರಿಯ ಋಷಿಗಳಿಗೆ , ಎಲ್ಲರಿಗೂ ಮೂಲ ನಾನೆ ಅಲ್ಲವೆ?

ಕೃಷ್ಣ ಇಲ್ಲಿ ಒಂದು ಮೂಲಭೂತವಾದ ಸಂಗತಿಯನ್ನು ತಿಳಿಸುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ: “ನನ್ನ ಪ್ರಭವವನ್ನು ಮಹರ್ಷಿಗಳಿಂದ ಹಿಡಿದು ಬ್ರಹ್ಮಾದಿ ದೇವತೆಗಳೂ ತಿಳಿದಿಲ್ಲ” ಎಂದು. ಇಲ್ಲಿ ‘ಪ್ರಭವ’ ಎನ್ನುವ ಪದವನ್ನು ಮೂರು ಅರ್ಥದಲ್ಲಿ ಬಳಸಲಾಗಿದೆ. ಪ್ರಭವ ಎಂದರೆ ಮೂಲ ಅಥವಾ ಹುಟ್ಟು; ಪ್ರಭವ ಎಂದರೆ ಸಾಮರ್ಥ್ಯ ಅಥವಾ ಹಿರಿಮೆ; ಪ್ರಭವ ಎಂದರೆ ಜಗತ್ತಿನ ಉತ್ಪತ್ತಿ. “ನನ್ನ ಮೂಲ, ನನ್ನ ಮಹಿಮೆ ಮತ್ತು ನನ್ನಿಂದಾದ ಈ ಜಗತ್ತಿನ ಹುಟ್ಟು-ನನ್ನನ್ನು ಸಾಕ್ಷಾತ್ಕರಿಸಿಕೊಂಡ  ಮಹಾಜ್ಞಾನಿಗಳಿಂದ ಹಿಡಿದು, ನನ್ನ ಅಪರೋಕ್ಷ ಜ್ಞಾನ ಪಡೆದ ಬ್ರಹ್ಮಾದಿ ದೇವತೆಗಳಿಗೂ ತಿಳಿದಿಲ್ಲ” ಎನ್ನುತ್ತಾನೆ ಕೃಷ್ಣ.

ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್
ಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ     

ಯಃ ಮಾಮ್ ಅಜಮ್ ಅನಾದಿಮ್  ಚ ವೇತ್ತಿ ಲೋಕ ಹಾ ಈಶ್ವರಮ್
ಸಮ್ಮೂಢಃ  ಸಃ  ಮರ್ತ್ಯೇಷು ಸರ್ವ ಪಾಪೈಃ ಪ್ರಮುಚ್ಯತೇ –ನಾನು ಹುಟ್ಟಿರದವನು. ಎಲ್ಲವನ್ನು ನಡೆಸುತ್ತ ಎಲ್ಲದರ ಮೊದಲಿದ್ದವನು [ಪ್ರಾಣತತ್ವಕ್ಕೂ ಮೂಲಕಾರಣ]. ಎಲ್ಲ ಲೋಕಗಳ ಒಡೆಯರಿಗು ಹಿರಿಯೊಡೆಯ. ಮನುಜರಲ್ಲಿ ಹೀಗೆ ನನ್ನನ್ನು ತಿಳಿದವನು ಮೋಹವಳಿದವನು. ಅವನು ಪಾಪಗಳಿಂದ ಪಾರಾಗುತ್ತಾನೆ.

ನಮ್ಮಲ್ಲಿ ಕೆಲವರಿಗೆ ಒಂದು ಪ್ರಶ್ನೆ ಬರುವುದಿದೆ. “ಸಕಲ ಜೀವಜಾತವನ್ನು ಭಗವಂತ ಸೃಷ್ಟಿ ಮಾಡಿದರೆ ಆತನನ್ನು ಯಾರು ಸೃಷ್ಟಿ ಮಾಡಿದರು” ಎಂದು. ಒಂದು ವೇಳೆ ಭಗವಂತನನ್ನು ಇನ್ನೊಬ್ಬ ಸೃಷ್ಟಿ ಮಾಡುತ್ತಿದ್ದರೆ ನಾವು ಈತನನ್ನು ದೇವರು ಎಂದು ಹೇಳಲಾಗುತ್ತಿರಲಿಲ್ಲ ಎನ್ನುವ ವಿಚಾರ ಕೂಡ ನಮಗೆ ಹೊಳೆಯುವುದಿಲ್ಲ. ಕೃಷ್ಣನಿಗೆ ನಮ್ಮ ಸಂದೇಹ ಏನು ಎನ್ನುವುದು ಗೊತ್ತು. ಅದಕ್ಕಾಗಿ ಆತ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ನೀಡಿದ್ದಾನೆ. ಕೃಷ್ಣ ಹೇಳುತ್ತಾನೆ “ಯಃ ಮಾಮ್ ಅಜಮ್ ಅನಾದಿಮ್ ” ಎಂದು. ಇಲ್ಲಿ ‘ಅಜ’ ಎಂದರೆ ಹುಟ್ಟಿರದವನು. ಭಗವಂತ ಹುಟ್ಟು ಸಾವಿನಿಂದಾಚೆ ನಿಂತವನು. ಅದಕ್ಕಾಗಿ ನಾವು ಹುಟ್ಟು-ಸಾವಿನಿಂದ ಪಾರಾಗಬೇಕಾದರೆ ಆತನನ್ನು ಉಪಾಸನೆ ಮಾಡಿ ಆತನನ್ನು ಸೇರಬೇಕು.  ಭಗವಂತ ಅನಾದಿ. ಇಲ್ಲಿ ಅನಾದಿ(ಅನ+ಆದಿ) ಎಂದರೆ: ‘ಸೃಷ್ಟಿಗೆ ಮೊದಲು ಪ್ರೇರಣೆ ಮಾಡುತ್ತಿದ್ದವ ಮತ್ತು ಸೃಷ್ಟಿ ಮಾಡಿ ಈ ಸೃಷ್ಟಿಯಲ್ಲಿ ಸಮಸ್ತ ವ್ಯಾಪಾರವನ್ನು ನಿಯಂತ್ರಣ ಮಾಡತಕ್ಕ ಸರ್ವೋತ್ಕೃಷ್ಟ ಶಕ್ತಿ’. 
ಭಗವಂತ ‘ಲೋಕಮಹೇಶ್ವರಃ’. ಬ್ರಹ್ಮಾದಿ ಸಮಸ್ತ ದೇವತೆಗಳು-'ಲೋಕೇಶರು'. ಅವರನ್ನು ಹೆತ್ತ ಮಾತೆ ಲಕ್ಷ್ಮಿ-'ಲೋಕೇಶ್ವರಿ'. ಅವಳಿಗೂ ಮಹಾನ್-'ಲೋಕಮಹೇಶ್ವರ'  ಆ ಭಗವಂತ. ಆತನಿಂದ ಮಹತ್ತಾದ ಇನ್ನೊಂದು ತತ್ವವಿಲ್ಲ.
ಮಹರ್ಷಿಗಳು, ದೇವತೆಗಳು, ಎಲ್ಲರನ್ನು  ಸೃಷ್ಟಿ ಮಾಡಿದವ ಆ ಭಗವಂತ. ಆದ್ದರಿಂದ ಇವರ್ಯಾರೂ ಆತನ ಮಹಿಮೆಯ ತುದಿಯನ್ನು ಕಂಡಿಲ್ಲ. ಋಗ್ವೇದದಲ್ಲಿ ಒಂದು ಕಡೆ ಹೀಗೆ ಹೇಳುತ್ತಾರೆ: ನ ತೇ ವಿಷ್ಣೋ ಜಾಯಮಾನೋ ನಾ ಜಾತೋ ದೇವ ಮಹಿಮ್ನಃ ಪರಮಂತಮಾಪ ಎಂದು. ಹಿಂದೆ ಹುಟ್ಟಿದವರಾಗಲಿ, ಮುಂದೆ ಹುಟ್ಟುವವನಾಗಲಿ, ಭಗವಂತನ ಮಹಿಮೆಯ ತುತ್ತ ತುದಿಯನ್ನು ತಿಳಿದಿಲ್ಲ,  ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಅದು ಅನಂತ.
ಈ ಪ್ರಪಂಚ ಸೃಷ್ಟಿ ಹೇಗಾಯಿತು ಎನ್ನುವುದು ಕೂಡಾ ಯಾರಿಗೂ ತಿಳಿದಿಲ್ಲ. ಏಕೆಂದರೆ ಪ್ರಳಯ ಕಾಲದಲ್ಲಿ ಎಲ್ಲವೂ ಭಗವಂತನ ಉದರದಲ್ಲಿ ನಿದ್ರಾವಸ್ತೆಯಲ್ಲಿದ್ದು, ಆ ನಂತರ ಸೃಷ್ಟಿ ಕಾಲದಲ್ಲಿ ಮೊತ್ತ ಮೊದಲಿಗೆ ಚತುರ್ಮುಖನನ್ನು ಭಗವಂತ ಸೃಷ್ಟಿ ಮಾಡಿದ. ಆದ್ದರಿಂದ ಚತುರ್ಮುಖನ ಹುಟ್ಟಿಗೆ ಮೊದಲು ಆರಂಭವಾದ ಈ ಸೃಷ್ಟಿ ನಿರ್ಮಾಣವನ್ನು ಕಂಡವರ್ಯಾರೂ ಇಲ್ಲ. ಇದಕ್ಕಾಗಿ ಋಗ್ವೇದದಲ್ಲಿ  “ಈ ಸೃಷ್ಟಿಯ ರಹಸ್ಯ ತಿಳಿದಿದ್ದರೆ ಒಬ್ಬ ಜಾಣ ಮಗನಿಗೆ ತಿಳಿದಿರಬೇಕು” ಎನ್ನುತ್ತಾರೆ. ಆತನೇ ಭಗವಂತನ ಸೃಷ್ಟಿಯ ಮೊದಲ ಜೀವ-‘ಚತುರ್ಮುಖ ಬ್ರಹ್ಮ’.  ಈ ಎಲ್ಲಾ ಕಾರಣದಿಂದ ಸಾಮಾನ್ಯ ಮಾನವರಾದ ನಾವು ಭಗವಂತನ ಪೂರ್ಣ ಮಹಿಮೆಯನ್ನು ತಿಳಿಯಲು ಸಾಧ್ಯವೇ ಇಲ್ಲ. ಇದನ್ನು ಆಚಾರ್ಯರು ಹೀಗೆ ಹೇಳಿದ್ದಾರೆ: “ಬಹು ಚಿತ್ರ ಜಗತ್  ಬಹುದಾಕಾರಣಾತ್ ಪರಶಕ್ತಿರನಂತ ಗುಣಃ ಪರಮಃ” ಎಂದು. ಭಗವಂತನ ಸೃಷ್ಟಿಯ ಈ ಪ್ರಪಂಚವೇ ಇಷ್ಟೊಂದು ಅದ್ಭುತವಾಗಿರುವಾಗ ಆ ಸೃಷ್ಟಿಕರ್ತ ಅದೆಷ್ಟು ಅದ್ಭುತವಾಗಿರಬೇಕು. ಆದ್ದರಿಂದ ಭಗವಂತ ಅನಂತ ಎನ್ನುವ ನಿಜವನ್ನರಿತು ಆತನನ್ನು ಉಪಾಸನೆ ಮಾಡುವುದೊಂದೇ ಮೋಕ್ಷ ಮಾರ್ಗ. ಭಗವಂತನ ಬಗ್ಗೆ ಈ ನಿಜವನ್ನು ತಿಳಿದವ ‘ಅಸಮ್ಮೂಢ’. ಆತ ಯಾವ ಭ್ರಮೆಗೂ ಒಳಗಾಗದೆ ಸದಾ ಎಲ್ಲರನ್ನೂ ಪ್ರೀತಿಸುತ್ತ ಎಲ್ಲರಲ್ಲೂ ಭಗವಂತನನ್ನು ಕಾಣುತ್ತಿರುತ್ತಾನೆ. “ಈ ಸತ್ಯವನ್ನರಿತ ಸಾಧಕ  ಸರ್ವ ಪಾಪಗಳಿಂದ ಪಾರಾಗುತ್ತಾನೆ” ಎನ್ನುವುದು ಕೃಷ್ಣನ ಭರವಸೆ.