Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Wednesday, September 28, 2011

Bhagavad Geeta Kannada Chapter-11 Shloka 5-8


ಭಗವಾನುವಾಚ ।
ಪಶ್ಯ ಮೇ ಪಾರ್ಥ ರೂಪಾಣಿ ಶತಶೋSಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥೫॥

ಭಗವಾನ್ ಉವಾಚ-ಭಗವಂತ ಹೇಳಿದನು:
ಪಶ್ಯ ಮೇ ಪಾರ್ಥ ರೂಪಾಣಿ ಶತಶಃ ಅಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾ ವರ್ಣ ಆಕೃತೀನಿ ಚ –ನೋಡು ಪಾರ್ಥ, ನನ್ನ ರೂಪಗಳನ್ನು- ನೂರಾರು, ಸಾವಿರಾರು; ಬಗೆಬಗೆಯವು; ಹೊಳೆಯುವಂಥವು; ಹಲವು ಬಣ್ಣ-ಆಕಾರದವು.

ನಿನ್ನ ರೂಪವನ್ನು ತೋರು ಎಂದು ಅರ್ಜುನ ಏಕವಚನದಲ್ಲಿ ಕೇಳಿದರೆ ಕೃಷ್ಣ ಬಹುವಚನದಲ್ಲಿ ಹೇಳುತ್ತಾನೆ “ನೋಡು ನನ್ನ ರೂಪಗಳನ್ನು” ಎಂದು. ಭಗವಂತನ ಎಲ್ಲಾ ರೂಪಗಳೂ ಒಂದೆ. ಮೂಲ ರೂಪಕ್ಕೂ ಅವತಾರ ರೂಪಕ್ಕೂ ಭೇದವಿಲ್ಲ. “ನೀನು ಹಿಂದೆಂದೂ ಕಾಣದ ಅತ್ಯದ್ಭುತವಾದ ನನ್ನ ನೂರಾರು, ಸಾವಿರಾರು, ಬಗೆಬಗೆಯ, ಹೊಳೆಯುವಂಥಹ, ಹಲವು ಬಣ್ಣ ಮತ್ತು ಆಕಾರದ ರೂಪಗಳನ್ನು ನೋಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ನಿಜವಾದ ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ ಹೊರಟವರು ‘ಪಾರ್ಥರು’.

ಪಶ್ಯಾSದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾSಶ್ಚರ್ಯಾಣಿ ಭಾರತ ॥೬॥

ಪಶ್ಯ ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಃ ತಥಾ ।
ಬಹೂನಿ ಅದೃಷ್ಟ ಪೂರ್ವಾಣಿ ಪಶ್ಯ ಆಶ್ಚರ್ಯಾಣಿ ಭಾರತ -- ನೋಡು-ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿಗಳನ್ನು ಮತ್ತು ಮರುತ್ತುಗಳನ್ನು. ಓ ಭಾರತ, ನೋಡು ಹಿಂದೆಂದೂ ಕಂಡಿರದ ಹಲವು ಅಚ್ಚರಿಗಳನ್ನು.

“ಜಗತ್ತಿನಲ್ಲಿರುವ ಎಲ್ಲ ಆದಿತ್ಯರು(ದ್ವಾದಶಾದಿತ್ಯರು),  ವಸುಗಳು (ಅಷ್ಟ ವಸುಗಳು), ರುದ್ರರು (ಏಕಾದಶ ರುದ್ರರು), ಅಶ್ವಿಗಳು(ಇಬ್ಬರು), ಮರುತ್ತುಗಳು(ನಲವತ್ತೊಂಬತ್ತು)-ಎಲ್ಲರನ್ನು ನೋಡು. ನೀನು ಹಿಂದೆಂದೂ ಕಂಡು ಕೇಳರಿಯದ ಅತ್ಯದ್ಭುತ ಅಚ್ಚರಿಯನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ‘ಭಾರತ’ ಎಂದು ಸಂಬೋಧಿಸಿದ್ದಾನೆ. ಐತರೇಯ ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯು ದೇವರಿಗೆ ಭರತ ಎಂದು ಹೆಸರು. ಆದ್ದರಿಂದ ಇಲ್ಲಿ ‘ಭಾರತ’ ಎಂದರೆ ‘ಭೀಮ(ಪ್ರಾಣತತ್ವ)ನ ತಮ್ಮ’ ಎನ್ನುವ ಅರ್ಥವನ್ನು ಕೊಡುತ್ತದೆ. [ಸದಾ ಭಗವಂತನಿಗೆ ಅತಿ ಹತ್ತಿರವಿರುವ ಹನುಮಂತ ಅಥವಾ ಪ್ರಾಣತತ್ವದ ಉಪಾಸನೆ ಭಗವಂತನನ್ನು ತಿಳಿಯುವ ಸುಲಭ ಸಾಧನ.]

ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥೭॥

ಇಹ ಏಕ ಸ್ಥಮ್ ಜಗತ್ ಕೃತ್ಸ್ನಮ್  ಪಶ್ಯ ಅದ್ಯ ಸ ಚರ ಅಚರಮ್ ।
ಮಮ ದೇಹೇ ಗುಡಾಕೇಶ ಯತ್ ಚ ಅನ್ಯತ್  ದ್ರಷ್ಟುಮ್ ಇಚ್ಛಸಿ—ಇಲ್ಲಿ ನೋಡೀಗ, ನನ್ನ ಮೈಯಲ್ಲಿ ಚರಾಚರಗಳಿಂದ ಕೂಡಿದ ಇಡಿಯ ಜಗತ್ತು ಒಂದುಗೂಡಿದ್ದನ್ನು. ಓ ಗುಡಾಕೇಶ, ಇನ್ನೇನು ನೋಡ ಬಯಸುವೆ ಅದನ್ನೆಲ್ಲಾ ನೋಡು.

“ನನ್ನ ದೇಹವನ್ನು ಆಶ್ರಯಿಸಿಕೊಂಡಿರುವ ಸಮಸ್ತ ವಿಶ್ವವನ್ನು ನೋಡು. ಬ್ರಹ್ಮಾಂಡದೊಳಗೆ ಏನೇನಿದೆಯೋ ಅದೆಲ್ಲವೂ ಇಲ್ಲಿದೆ. ಚೇತನ, ಅಚೇತನ, ಚಲಿಸುವ, ಚಲಿಸದ, ಎಲ್ಲವೂ. ನಿನಗೆ ಏನು ನೋಡಬೇಕು ಎಂದು ನಿನ್ನ ಮನಸ್ಸು ಬಯಸುತ್ತದೆ ಅದನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ಗುಡಾಕೇಶ ಎಂದು ಸಂಬೋಧಿಸುತ್ತಾನೆ. ಅಜ್ಞಾನ, ಆಲಸ್ಯ ಮತ್ತು ನಿದ್ದೆಯನ್ನು ಗೆದ್ದವ ಗುಡಾಕೇಶ.

ಇಲ್ಲಿ ಒಂದೊಂದು ಶ್ಲೋಕದಲ್ಲಿ ಒಂದೊಂದು ವಿಶೇಷಣ ಬಳಸಿದ್ದಾರೆ. ಈ ವಿಶೇಷಣದ ಹಿಂದೆ ಇರುವ ಅರ್ಥವನ್ನು ನೋಡಿದಾಗ ತಿಳಿಯುವುದೇನೆಂದರೆ -ನಮಗೆ ಭಗವಂತ ತಿಳಿಯಬೇಕಾದರೆ ನಾವೂ ಕೂಡ ಪಾರ್ಥ, ಭಾರತ, ಗುಡಾಕೇಶರಾಗಬೇಕು ಎನ್ನುವುದು. ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ(ಪಾರ್ಥ), ಪ್ರಾಣತತ್ವದ ಉಪಾಸನೆ(ಭಾರತ), ಅಜ್ಞಾನ, ಆಲಸ್ಯ ಗೆದ್ದು ಭಗವಂತನ ಚಿಂತನೆ(ಗುಡಾಕೇಶ) ಮಾಡಿದಾಗ- ಆ ಭಗವಂತನ ರೂಪ ನಮಗೆ ತಿಳಿದೀತು.    

ನತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್    ॥೮॥

ನ ತು ಮಾಮ್  ಶಕ್ಯಸೇ ದ್ರಷ್ಟುಮ್ ಅನೇನ ಏವ ಸ್ವ ಚಕ್ಷುಷಾ ।
ದಿವ್ಯಮ್  ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮ್ ಐಶ್ವರಮ್—ಆದರೆ ನಿನ್ನ ಈ ಹೊರಗಣ್ಣಿಂದಲೆ ನೋಡಲಾರೆ ನನ್ನನ್ನು. ನೀಡುತ್ತೇನೆ ನಿನಗೆ ದಿವ್ಯದ ಒಳಗಣ್ಣು. ನೋಡು ಜಗವನಾಳುವ ನನ್ನಳವನ್ನು.

ಭಗವಂತನ ರೂಪವನ್ನು ಈ ನಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಸ್ವರೂಪಭೂತನಾದ ಆ ಭಗವಂತನನ್ನು ನಾವು ನಮ್ಮ ಸ್ವರೂಪಭೂತವಾದ ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಆತನ ಸ್ವರೂಪಭೂತವಾದ ಕಣ್ಣಿನಿಂದ ಸರ್ವಸಮರ್ಥ ಭಗವಂತನನ್ನು ನೋಡುವ ಸೌಭಾಗ್ಯವನ್ನು ಕರುಣಿಸುತ್ತಾನೆ.  

No comments:

Post a Comment