Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, September 19, 2011

Bhagavad geeta Kannada Chapter-10 Shloka 30-31


ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್     ।
ಮೃಗಾಣಾಂ ಚ ಮೃಗೇಂದ್ರೋSಹಂ ವೈನತೇಯಶ್ಚ ಪಕ್ಷಿಣಾಮ್ ॥೩೦॥

ಪ್ರಹ್ಲಾದಃ ಚ ಅಸ್ಮಿ ದೈತ್ಯಾನಾಮ್  ಕಾಲಃ ಕಲಯತಾಮ್ ಅಹಮ್     ।
ಮೃಗಾಣಾಮ್  ಚ ಮೃಗೇಂದ್ರಃ ಅಹಮ್  ವೈನತೇಯಃ ಚ  ಪಕ್ಷಿಣಾಮ್ –ದಿತಿಯ ವಂಶದವರಲ್ಲಿ ಹಿರಿಯನಾದ ಪ್ರಹ್ಲಾದ ನಾನು [ಹಿರಿಯ ಆನಂದದಿಂದ ‘ಪ್ರಹ್ಲಾದ’ ಎನ್ನಿಸಿ ಪ್ರಹ್ಲಾದನಲ್ಲಿದ್ದೇನೆ.] ಲೆಕ್ಕಿಗರಲ್ಲಿ ಕಾಲ ನಾನು. [ಕೊಲ್ಲುವವನಾದ್ದರಿಂದ ‘ಕಾಲ’ ಎನ್ನಿಸಿ ಕಾಲದೇವತೆಯಲ್ಲಿದ್ದೇನೆ.] ಮೃಗಗಳಲ್ಲಿ ಸಿಂಹ ನಾನು. [ಮೃಗ=ಭಗವಂತನನ್ನರಸುವ ಭಕ್ತರಿಗೆ, ಇಂದ್ರ =ಒಡೆಯನಾದ್ದರಿಂದ ‘ಮೃಗೇಂದ್ರ’ ಎನ್ನಿಸಿ ಸಿಂಹದಲ್ಲಿದ್ದೇನೆ.] ಹಕ್ಕಿಗಳಲ್ಲಿ ಗರುಡ ನಾನು. [ವಿನತ =ಶರಣಾದವರಿಗೆ  ಆಸರೆಯಾಗಿ ‘ವೈನತೇಯ’ ಎನ್ನಿಸಿ ಗರುಡನಲ್ಲಿದ್ದೇನೆ.]

ಭಗವಂತನ ಸನ್ನಿಧಾನ ಸಜ್ಜನರಲ್ಲೂ ಇದೆ, ದುರ್ಜನರಲ್ಲೂ ಇದೆ.  ದೈತ್ಯರಿಗೆ ಬಲವನ್ನು ಕೊಡುವವನೂ ಭಗವಂತ. ಸಾಮಾನ್ಯವಾಗಿ ದೈತ್ಯರು ಇನ್ನೊಬ್ಬರ ಬದುಕನ್ನು ಹಾಳುಗೆಡುವವರು. ಆದರೆ ಇಂಥಹ ದೈತ್ಯವಂಶದ ಆದಿಯಲ್ಲಿ ಹುಟ್ಟಿದ ಪ್ರಹ್ಲಾದ-ಎಲ್ಲರಿಗಿಂತ ಭಿನ್ನ. ಇದಕ್ಕೆ ಕಾರಣ ಭಗವಂತ ಈತನಲ್ಲಿ ವಿಶೇಷವಾಗಿ ಸನ್ನಿಧಾನವಿತ್ತಿರುವುದು. ದೈತ್ಯ ವಂಶದಲ್ಲಿ ಹುಟ್ಟಿ, ಆ ಸ್ವಭಾವದಿಂದ ಕಳಚಿಕೊಂಡು ಬಹಳ ಎತ್ತರಕ್ಕೇರಿದವ  ಪ್ರಹ್ಲಾದ. ಈ ಕಾರಣದಿಂದ ದೈತ್ಯರಲ್ಲೇ ವಿಶೇಷ ವಿಭೂತಿ ಈತ. ಪ್ರಹ್ಲಾದನ ಮೇಲೆ ಭಗವಂತನ ವಿಶೇಷ ಅನುಗ್ರಹ. ಆತ ಗರ್ಭದಲ್ಲಿದ್ದಾಗಲೇ ಆತನಿಗೆ ದೇವರ್ಷಿ ನಾರದರ ಮೂಲಕ ಅಧ್ಯಾತ್ಮ ಉಪದೇಶ ಪಡೆಯುವ ಭಾಗ್ಯ ದೊರೆಯಿತು. ಈತ ದ್ರುವನಂತೆ ತನ್ನ ಐದನೇ ವಯಸ್ಸಿನಲ್ಲಿ ದೇವರನ್ನು ಕಂಡ ಸಾಧಕ. ಪ್ರಹ್ಲಾದನ ಮುಖೇನ ಪ್ರಪಂಚಕ್ಕೆ ಭಗವಂತ ಬಹಳ ಮುಖ್ಯವಾದ ಸಂದೇಶವನ್ನು ನೀಡಿದ್ದಾನೆ. ‘ಭಗವಂತ ಭಯಾನಕ ಅಲ್ಲ, ಪ್ರೀತಿಯಿಂದ ಭಗವಂತನ ಬಳಿಗೆ ಹೋದರೆ ಆತ ನಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾನೆ; ಭಗವಂತನ ಪೂಜೆ ಒಂದು ವ್ಯಾಪಾರವಲ್ಲ, ನಮ್ಮ ಯಾವುದೋ ಬಯಕೆಯನ್ನು ಸಾಧಿಸಿಕೊಳ್ಳುವುದಕ್ಕೋಸ್ಕರ ನಾವು ದೇವರ ಪೂಜೆ ಮಾಡಬಾರದು; ನಮ್ಮ ನಿಷ್ಕಾಮ ಭಕ್ತಿ ಭಗವಂತನಿಗೆ ಇಷ್ಟ; ಈ ರೀತಿ ಭಗವಂತನನ್ನು ಪೂಜಿಸುವುದರಿಂದ ನಾವು ಸದಾ ಆನಂದದಿಂದಿರಬಹುದು’ ಎನ್ನುವ ಸತ್ಯವನ್ನು ಪ್ರಹ್ಲಾದ ಪ್ರಪಂಚಕ್ಕೆ ತೋರಿಸಿಕೊಟ್ಟ. ಇಲ್ಲಿ ಬರುವ ಭಗವಂತನ ನಾಮ ಪ್ರಹ್ಲಾದಃ. ಎಂದೂ ದುಃಖವಿಲ್ಲದ ಪೂರ್ಣವಾದ ಆನಂದಮೂರ್ತಿ ಭಗವಂತ ಪ್ರಹ್ಲಾದಃ.
ಕೃಷ್ಣ ಹೇಳುತ್ತಾನೆ: “ಕಾಲಃ ಕಲಯತಾಮ್ ಅಹಮ್” ಎಂದು. ಈ ಜಗತ್ತಿನಲ್ಲಿ ಅನಾಧಿ ಅನಂತ ಕಾಲದಲ್ಲಿ ನಡೆಯತಕ್ಕ ಪ್ರತಿಯೊಂದು ಹುಟ್ಟು-ಸಾವು ಪೂರ್ವನಿಶ್ಚಿತ. ಇದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಲ್ಲಿ ಕಾಲ ಎನ್ನುವ ಪದ ಲೆಕ್ಕ, ಮೃತ್ಯು, ಶಿವ, ದುರ್ಗೆ, ಕಾಲಾಗ್ನಿ, ಇತ್ಯಾದಿ ಅನೇಕ ಅರ್ಥವನ್ನು ಕೊಡುತ್ತದೆ. ಇವೆಲ್ಲದರಲ್ಲೂ ಭಗವಂತನ ವಿಶೇಷ ವಿಭೂತಿ ಅಡಗಿದೆ. ಭಗವಂತ ಕಾಲಃ ನಾಮಕನಾಗಿ ‘ಕಾಲ’ದಲ್ಲಿ ತುಂಬಿದ್ದಾನೆ. ಕಾಲ ಎನ್ನುವುದು 'ಕಲ' ಎನ್ನುವ ಧಾತುವಿನಿಂದ ಬಂದ ಪದ. ಎಲ್ಲಾ ಗುಣಗಳನ್ನು, ಎಲ್ಲಾ ಸಾಮರ್ಥ್ಯವನ್ನು ತನ್ನೊಳಗೆ 'ಕಲೆ' ಹಾಕಿದವನು ಕಾಲಃ. ಭಗವಂತ ಸಮಸ್ತ ಸದ್ಗುಣಗಳಿಂದ ಪರಿಪೂರ್ಣವಾದ ತತ್ವ. ಈ ತತ್ವವನ್ನು ನಾವು ಅರಿಯದೆ ಅಹಂಕಾರಿಗಳಾದಾಗ, ಅದೇ ತತ್ವ 'ಕಾಲ ಪುರುಷನಾಗಿ' ನಮ್ಮ ಸಂಹಾರಕ್ಕೆ ಕಾರಣವಾಗುತ್ತದೆ. ನಮ್ಮ ಉದ್ಧಾರ ಕೆಲವೊಮ್ಮೆ 'ಬದುಕಿನಲ್ಲಿ'ದ್ದರೆ ಇನ್ನು  ಕೆಲವೊಮ್ಮೆ ನಮ್ಮ 'ಸಾವಿನಲ್ಲಿ'; ಕೆಲವೊಮ್ಮೆ ನಮ್ಮ 'ಮಾನದಲ್ಲಿ', ಇನ್ನು ಕೆಲವೊಮ್ಮೆ ನಮ್ಮ 'ಅವಮಾನದಲ್ಲಿ'.; ಕೆಲವೊಮ್ಮೆ ನಮ್ಮ 'ಜ್ಞಾನದಲ್ಲಿ' ನಮ್ಮ ಉದ್ಧಾರವಿದ್ದರೆ, ಇನ್ನು ಕೆಲವೊಮ್ಮೆ ನಮ್ಮ 'ಅಜ್ಞಾನದಲ್ಲಿ' ನಮ್ಮ ಉದ್ಧಾರವಿರುತ್ತದೆ. ಆದರೆ ನಮ್ಮ 'ಅಹಂಕಾರದಲ್ಲಿ' ಎಂದೆಂದೂ ಉದ್ಧಾರವಿಲ್ಲ. ಜಗತ್ತಿನಲ್ಲಿ ಅಹಂಕಾರ ಭರಿತ ಅಜ್ಞಾನ ತುಂಬಿದಾಗ ಭಗವಂತ 'ಕಾಲ ಪುರುಷನಾಗಿ' ಬೆಳೆದು ನಿಲ್ಲುತ್ತಾನೆ. ಕಾಲ ಎನ್ನುವುದಕ್ಕೆ ಇನ್ನೊಂದು ಅರ್ಥ 'ಸಮಯ'. ಪ್ರತಿಯೊಂದು ಕ್ರಿಯೆಯ ಹಿಂದೆ 'ಕಾಲ' ಸರ್ವ ಕಾರಣವಾಗಿರುತ್ತದೆ. ಕಾಲನಿಯಾಮಕ ಭಗವಂತ ಕಾಲಃ. ಜ್ಞಾನಕಾರಕವಾದ ಅವತಾರಗಳಿಂದ (ವ್ಯಾಸ,ಕಪಿಲ,ದತ್ತಾತ್ರಯ, ನರ-ನಾರಾಯಣ, ಇತ್ಯಾದಿ) ಅಜ್ಞಾನಕ್ಕೆ 'ಕಾಲವಾದ' ಭಗವಂತ, ಬಲಕಾರಕ ಅವತಾರಗಳಿಂದ(ನರಸಿಂಹ, ವರಾಹ, ರಾಮ,ಪರಶುರಾಮ, ಇತ್ಯಾದಿ) ಅಹಂಕಾರಕ್ಕೆ 'ಕಾಲನಾದ'. ಹೀಗೆ ಸರ್ವ ಗುಣಪೂರ್ಣ, ಸರ್ವ ಸಂಹಾರಕ ಹಾಗು ಕಾಲನಿಯಾಮಕ ಭಗವಂತ ಕಾಲಃ.
ಸಂಹಾರ ಶಕ್ತಿಯಾಗಿ ತನ್ನ ವಿಭೂತಿಯನ್ನು ಹೇಳಿದ ಕೃಷ್ಣ, ಮುಂದೆ ಪ್ರಾಣಿಗಳಲ್ಲಿ ಬಹಳ ಉಗ್ರ ಮತ್ತು ಬಲಿಷ್ಠ ಪ್ರಾಣಿಯಲ್ಲಿ ತನ್ನ ವಿಭೂತಿಯನ್ನು ವಿವರಿಸುತ್ತಾನೆ. ಭೂಮಿಯಲ್ಲಿ ಹೆಚ್ಚು ಬಲಿಷ್ಠ ಮತ್ತು ದೊಡ್ಡ ಪ್ರಾಣಿ ಆನೆ. ಆದರೆ ಇಂಥಹ ಆನೆಯನ್ನೂ ಕೂಡಾ ಸಂಹಾರ ಮಾಡಬಲ್ಲ ಕಾಡಿನ ರಾಜ ಮೃಗೇಂದ್ರ-ಸಿಂಹ. ಮೃಗಗಳಲ್ಲೇ ಶ್ರೇಷ್ಠ ಮೃಗ ಎನ್ನಿಸಿಕೊಳ್ಳುವ ವಿಭೂತಿಯಾಗಿ ಭಗವಂತ ಸಿಂಹದಲ್ಲಿ ಕೂತ. ಇಲ್ಲಿ ಬರುವ ಭಗವಂತನ ನಾಮ ‘ಮೃಗೇಂದ್ರಃ’. ಭಗವಂತನ ಸಾಧನೆಯಲ್ಲಿ ನಿಂತವರಿಗೆ ಮಾರ್ಗದರ್ಶಕನಾಗಿ ನಿಲ್ಲುವ(ಮೃಗ) ಸರ್ವಶ್ರೇಷ್ಠ ಭಗವಂತ ‘ಮೃಗೇಂದ್ರಃ’.
ಪ್ರಾಣಿಯ ನಂತರ ಪಕ್ಷಿಗಳಲ್ಲಿ ಭಗವಂತನ ವಿಭೂತಿ. ಪಕ್ಷಿಗಳಲ್ಲೇ ಅತ್ಯಂತ ಶ್ರೇಷ್ಠ ಪಕ್ಷಿ ‘ಗರುಡ’. ಹೊಟ್ಟೆಯ ಭಾಗ ಬೆಳ್ಳಗಿರುವ ಹದ್ದಿನ ಜಾತಿಯ ಪಕ್ಷಿ ಗರುಡ. ಭಗವಂತನ ವಾಹನ ಗರುಡ ವಿನುತೆಯ ಮಗ ಆದ್ದರಿಂದ ಈತನನ್ನು ವೈನತೇಯ ಎನ್ನುತ್ತಾರೆ. ತನಗೆ ಶರಣಾಗುವ ಭಕ್ತರಿಗೆ(ವಿನತ) ಆಸರೆಯಾಗಿ ‘ವೈನತೇಯ’ ಎನ್ನಿಸಿ ಭಗವಂತ ಗರುಡನಲ್ಲಿ ಸನ್ನಿಹಿತನಾಗಿದ್ದಾನೆ. ಭಗವಂತನನ್ನು ತನ್ನ ಹೆಗಲ ಮೇಲೆ ಹೊತ್ತು ಓಡಾಡುವ ಗರುಡ-ಭಗವಂತನ ವಿಶೇಷ ವಿಭೂತಿ.                   
ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ ।
ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ        ॥೩೧॥

ಪವನಃ ಪವತಾಮ್ ಅಸ್ಮಿ ರಾಮಃ ಶಸ್ತ್ರಭೃತಾಮ್ ಅಹಮ್ ।
ಝಷಾಣಾಮ್ ಮಕರಃ ಚ ಅಸ್ಮಿ ಸ್ರೋತಸಾಮ್ ಅಸ್ಮಿ ಜಾಹ್ನವೀಚಲಿಸುವ ವಸ್ತುಗಳಲ್ಲಿ ಮಿಗಿಲಾದ ಗಾಳಿ ನಾನು.[ಪ=ಜಗತ್ತನ್ನು ಪಾಲಿಸುವ ದೇವತೆಗಳಿಂದಲೂ, ವನ=ಸೇವ್ಯನಾದ್ದರಿಂದ ‘ಪವನ’ ಎನ್ನಿಸಿ ಗಾಳಿಯಲ್ಲಿದ್ದೇನೆ.] ಆಯುಧದಿಂದ ಹೋರಬಲ್ಲ ವೀರರಲ್ಲಿ ನಾನು [ರ=ಆನಂದರೂಪನಾಗಿ, ಅಮ=ಅಪರಿಮಿತನಾದ್ದರಿಂದ ಮತ್ತು ಲೋಕವನ್ನು ರಮಿಸುವುದರಿಂದ] ರಾಮನೆಂದು ಹೆಸರಾಗಿದ್ದೇನೆ. ಮೀನುಗಳಲ್ಲಿ ತಿಮಿಂಗಿಲ ನಾನು. [ಮ=ತಿಳಿವನ್ನು, ಕರ=ಕೊಡುವವನಾದ್ದರಿಂದ ‘ಮಕರ’ ಎನ್ನಿಸಿ ಮಕರದಲ್ಲಿದ್ದೇನೆ.] ನದಿಯಲ್ಲಿ ಗಂಗೆ ನಾನು. [ಜಹತ್ =ಕಾಮನೆಗಳನ್ನು ತೊರೆದವರಿಗೆ, ಅವಿ=ರಕ್ಷಕನಾಗಿ, ‘ಜಾಹ್ನವಿ’ ಎನ್ನಿಸಿ ಗಂಗೆಯಲ್ಲಿದ್ದೇನೆ.]

ಮುಂದುವರಿದು ಕೃಷ್ಣ ಹೇಳುತ್ತಾನೆ “ಪವನಃ ಪವತಾಮಸ್ಮಿ” ಎಂದು. ‘ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ಆಕಾಶದಲ್ಲಿ ಸಂಚರಿಸುವ ಶಕ್ತಿಗಳಲ್ಲೇ ದೊಡ್ಡ ವಿಭೂತಿ ‘ವಾಯು’. ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ವಿಶೇಷವಾಗಿ  ಸನ್ನಿಹಿತನಾಗಿರುವ ಭಗವಂತ ಪವನಃ. ಪವತೇ ಇತಿ ಪವನಃ - ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿಯಾಗಿರುವ ಭಗವಂತ, ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ '' ಎಂದರೆ 'ಪಾಲನೆ'. ನಮ್ಮನ್ನು ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ, ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.
“ಆಯುಧವನ್ನು ಹಿಡಿದು ಹೋರಾಡಬಲ್ಲ ವೀರರಲ್ಲಿ ರಾಮ ನಾನು” ಎಂದು ತನ್ನ ಸ್ವರೂಪ ವಿಭೂತಿಯನ್ನು ವಿವರಿಸುತ್ತಾನೆ ಕೃಷ್ಣ. ಭಗವಂತನ ಇತರ ಎಲ್ಲ ಅವತಾರಕ್ಕಿಂತ ರಾಮಾವತಾರದಲ್ಲಿ ಆತ ಕೋದಂಡಪಾಣಿಯಾಗಿ ಶಸ್ತ್ರದ ಪೂರ್ಣ ಬಳಕೆ ಮಾಡಿ ಶತ್ರು ನಿಗ್ರಹ ಮಾಡಿದ.
ರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದಸ್ವರೂಪ ಹಾಗು ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರು ಕೂಪಗೊಂಡಾಗಲೂ ಸಹ, ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ. ಬದಲಿಗೆ "ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಸಂತೋಷದಿಂದ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ, ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ. ಇದು ಜಗತ್ತಿಗೆ ಆನಂದ ಕೊಟ್ಟ ಭಗವಂತನ ಅಮಿತಾನಂದಸ್ವರೂಪ ವಿಭೂತಿ.
ನೀರಿನಲ್ಲಿರುವ ಮೀನುಗಳಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದೊಡ್ಡ ಆಕಾರವುಳ್ಳದ್ದು ತಿಮಿಂಗಿಲ. ಕೃಷ್ಣ ಹೇಳುತ್ತಾನೆ “ಝಷಾಣಾಂ ಮಕರಶ್ಚಾಸ್ಮಿ” ಎಂದು. ಇಲ್ಲಿ ಮಕರ ಎಂದರೆ ತಿಮಿಂಗಿಲ. ಭಗವಂತ ಮಕರಃ ಶಬ್ದವಾಚ್ಯನಾಗಿ ತಿಮಿಂಗಿಲನಲ್ಲಿ ವಿಶೇಷ ವಿಭೂತಿಯಾಗಿ ಅದಕ್ಕೆ ಆ ಶಕ್ತಿಯನ್ನು ಕೊಟ್ಟ. ತಿಳಿವನ್ನು(ಮ) ಕೊಡುವ(ಕರ) ಭಗವಂತ ಮಕರಃ.
“ನದಿಗಳಲ್ಲಿ ಗಂಗೆ ನಾನು” ಎನ್ನುತ್ತಾನೆ ಕೃಷ್ಣ. ನದಿಗಳಲ್ಲೇ ಶ್ರೇಷ್ಠ-ಗಂಗೆ. ಈ ನದಿ ನೀರಿಗೆ ಸಾಟಿಯಾದ ಔಷಧ ಇನ್ನೊಂದಿಲ್ಲ. ಗಂಗೆಯಲ್ಲಿ ಮಿಂದರೆ ನಾವು ನಮ್ಮ ಮನಃ ಶುದ್ಧಿ ಮಾಡಿಕೊಳ್ಳಬಹುದು. ಅಲ್ಲಿರುವ ಯಾವುದೇ ಕೊಳೆ ನಮಗಂಟದು. ಶೇಖರಿಸಿಟ್ಟರೆ ಎಂದೂ ಕೆಡದ ನೀರು ಗಂಗೆ. ಗಂಗೆಗೆ ಈ ಮಹಾನ್ ಶಕ್ತಿಯನ್ನು ಕೊಟ್ಟ ಭಗವಂತನ ವಿಭೂತಿನಾಮ ‘ಜಾಹ್ನವಿ’. ‘ಜಹ್ನು’ ಅಂದರೆ ತೊರೆಯುವುದು. ಕ್ಷುದ್ರ ಭೌತಿಕ ಬಯಕೆಗಳನ್ನು ತೊರೆದು, ಭಗವಂತನ ಮಾರ್ಗದಲ್ಲಿ ಸಾಗುವವರ ರಕ್ಷಣೆ ಮಾಡುವ ಭಗವಂತ ‘ಜಾಹ್ನವಿ’. ಇದು ಭಗವಂತನ ಸ್ತ್ರೀರೂಪ ಪ್ರತೀಕ ನಾಮ. ತಾಯಿಯಂತೆ ಸಲಹುವ ಭಗವಂತನನ್ನು ಸ್ತ್ರೀ ರೂಪದಲ್ಲಿ ಕೂಡ ಉಪಾಸನೆ ಮಾಡುತ್ತಾರೆ. ಜಾಹ್ನವಿ ಭಗವಂತನ ಸ್ತ್ರೀರೂಪದ ನಾಮ.     

No comments:

Post a Comment