Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, July 24, 2011

Bhagavad Gita Kannada Chapter-9 Shloka 2-3


ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್           
ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್

ರಾಜವಿದ್ಯಾ ರಾಜಗುಹ್ಯಮ್ ಪವಿತ್ರಮ್ ಇದಮ್  ಉತ್ತಮಮ್         
ಪ್ರತ್ಯಕ್ಷವಗಮಮ್  ಧರ್ಮ್ಯಮ್  ಸು ಸುಖಮ್  ಕರ್ತುಮ್ ಅವ್ಯಯಮ್-ಇದು ಅರಿವುಗಳ ಅರಸ. ಗುಟ್ಟುಗಳ ಗುಟ್ಟು. ಮಿಗಿಲಾದ ಅಪ್ಪಟ. ಕಣ್ಣಲ್ಲಿ ಕೂತವನ ಕಾಣಿಸುವ ದಾರಿ. ಎಲ್ಲ ಹೊತ್ತವನನ್ನು ಕುರಿತದ್ದು. ಆಚರಿಸಲು ಆರಾಮ. ಅಳಿವಿಲ್ಲದ್ದು.

ಕೃಷ್ಣ ತಾನು ಮುಂದೆ ಉಪದೇಶ ಮಾಡಲಿರುವ ಅಧ್ಯಾತ್ಮ ವಿಜ್ಞಾನದ ಬಗ್ಗೆ ಹೇಳುತ್ತಾ ಹೇಳುತ್ತಾನೆ “ಇದು ವಿದ್ಯೆಗಳಲ್ಲೆಲ್ಲಾ ಪ್ರಧಾನ ವಿದ್ಯೆ; ಅತ್ಯಂತ ರಹಸ್ಯವಾದ ಮತ್ತು ಪರಮ ಪವಿತ್ರವಾದ ವಿದ್ಯೆ” ಎಂದು. ಪ್ರತ್ಯಕ್ಷ ಶಬ್ದವಾಚ್ಯನಾದ(ಇಂದ್ರಿಯ ನಿಯಾಮಕಗಿರುವ ) ಭಗವಂತನನ್ನು ಪ್ರತ್ಯಕ್ಷ ತೋರಿಸುವಂತಹ, ಜಗತ್ತಿನ ಧಾರಕ ಶಕ್ತಿಯಾದ ಭಗವಂತನನ್ನು ನೇರ ವಿಷಯೀಕರಿಸುವ ಸಾಕ್ಷಾತ್ ಭಗವದ್ ವಿಷಯಕವಾದ ವಿದ್ಯೆ. ಈ ವಿದ್ಯೆಯನ್ನು ತಿಳಿದು ಭಗವಂತನನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ಏಕೆಂದರೆ ಭಗವಂತನಿಗೆ ಅತ್ಯಂತ ಪ್ರೀಯವಾದದ್ದು ಜ್ಞಾನ. ಭಗವಂತ ಜ್ಞಾನಕ್ಕೆ ಒಲಿದಷ್ಟು ಸುಲಭವಾಗಿ ಯಾವ ದಾರಿಗೂ ಒಲಿಯುವುದಿಲ್ಲ. “ಇದು ಅಳಿವಿರದ ದಾರಿ”     ಎನ್ನುತ್ತಾನೆ ಕೃಷ್ಣ.  ಆದ್ದರಿಂದ ಜ್ಞಾನದ ದಾರಿ ಎಂದೂ ವ್ಯರ್ಥವಲ್ಲ.

ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ 
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ     

ಅಶ್ರದ್ದಧಾನಾಃ ಪುರುಷಾಃ ಧರ್ಮಸ್ಯಸ್ಯ ಪರಂತಪ          
ಅಪ್ರಾಪ್ಯ ಮಾಮ್ ನಿವರ್ತಂತೇ ಮೃತ್ಯು ಸಂಸಾರ ವರ್ತ್ಮನಿ-ಅರಿಗಳ ಉರಿಯೆ, ಈ ನಡೆಯ ಬಗೆಗೆ ನಂಬಿಕೆಯಿಡದ ಮಂದಿ ನನ್ನನ್ನು ಪಡೆಯದೆ ಸಾವಿನ ಸುಳಿಯಾದ ಬಾಳ ದಾರಿಯಲ್ಲಿ ಜಾರಿಬೀಳುತ್ತಾರೆ.

ಹಿಂದೆ ಅಸೂಯೆ ಬಗ್ಗೆ ಹೇಳಿದ್ದ ಕೃಷ್ಣ ಇಲ್ಲಿ ಇನ್ನೊಂದು ಅತೀ ಮುಖ್ಯವಾದ  ಗುಣದ ಬಗ್ಗೆ ಹೇಳುತ್ತಾನೆ- ಅದೇ ‘ಶ್ರದ್ಧೆ’.  ಯಾರಿಗೆ ಶ್ರದ್ಧೆ ಇಲ್ಲ ಅವರಿಗೆ ಏನನ್ನು ಹೇಳಿಯೂ ಉಪಯೋಗವಿಲ್ಲ. ನಮಗೆ ಯಾವುದರ ಮೇಲೆ ಶ್ರದ್ಧೆ ಇಲ್ಲವೋ ಅದನ್ನು ನಮ್ಮ ಮನಸ್ಸು ಸ್ವೀಕರಿಸುವುದೇ ಇಲ್ಲ. ಒಂದು ವಿಷಯವನ್ನು ನಾವು ಗ್ರಹಣ ಮಾಡಬೇಕಾದರೆ ನಮಗೆ ಆ ವಿಷಯದಲ್ಲಿ ಶ್ರದ್ಧೆ ಇರಬೇಕು. “ನನಗೆ ಗೊತ್ತಿಲ್ಲದ ವಿಷಯಗಳು ಇರಲು ಸಾಧ್ಯ, ಏಕೆಂದರೆ ನನಗೆ ಗೊತ್ತಿಲ್ಲದೇ ಇರುವ ಬಹಳ ಸಂಗತಿಗಳಿವೆ” –ಎಂದು ತಿಳಿಯುವುದು  ಶ್ರದ್ಧೆಯ ಮೊದಲ ಮೆಟ್ಟಿಲು. (I must know that I do not know). ನಮ್ಮ ಅಜ್ಞಾನದ ಅರಿವು ನಮಗಿರಬೇಕು. ಆಗ ಗೊತ್ತಿಲ್ಲದ್ದನ್ನು ಗೊತ್ತು ಮಾಡಿಕೊಳ್ಳುವ ಶ್ರದ್ಧೆ ಬರುತ್ತದೆ. ಮೊದಲು ಗೊತ್ತಿಲ್ಲ ಅನ್ನುವುದರ ಬಗ್ಗೆ ನಮಗೆ ಗೊತ್ತಿರಬೇಕು; ಆಮೇಲೆ ನಮಗೆ ಗೊತ್ತಿಲ್ಲದೆ ಇರುವ ಇರುವ ವಿಷಯ ಸತ್ಯವಾಗಿರುವ ಸಾಧ್ಯತೆ ಇದೆ ಎನ್ನುವ ಸಾಧ್ಯತೆಯ ಅರಿವು ಬೇಕು; ಅದನ್ನು ತಿಳಿಯುವ ಶ್ರದ್ಧೆ ಬೇಕು. ಹೀಗೆ ತಿಳಿಯುತ್ತಾ ಗೊತ್ತಿಲ್ಲದ ವಸ್ತು ಇದೆ ಎನ್ನುವ ಸತ್ಯ ತಿಳಿಯುತ್ತದೆ.
ಜ್ಞಾನದ ದಾರಿಯಲ್ಲಿ ಸಾಗುವ ಸಾಧಕನಿಗೆ ಮೂಲಭೂತವಾಗಿ ನಂಬಿಕೆ ಬೇಕು. ನಂಬದವನ ಮುಂದೆ ಏನು ಹೇಳಿಯೂ ಪ್ರಯೋಜನವಿಲ್ಲ. ಇದನ್ನೇ ಇಲ್ಲಿ ಕೃಷ್ಣ ಹೇಳುತ್ತಾನೆ “ಯಾರಿಗೆ ಶ್ರದ್ಧೆ ಇಲ್ಲವೋ ಅಂತವರ ಪಾಲಿಗೆ ಸತ್ಯ ಇಲ್ಲ” ಎಂದು. ಜಗತ್ತಿನ ಧಾರಕನಾದ ಭಗವಂತನ ಬಗೆಗೆ ನಂಬಿಕೆ ಇಲ್ಲದವರು ಭಗವಂತನನ್ನು  ಸೇರುವುದಿಲ್ಲ. “ಅಂತವರು ಆತ್ಮ ನಾಶವಾದ ತಮಸ್ಸನ್ನು ಸೇರುತ್ತಾರೆ ಅಥವಾ ಸಂಸಾರದ ಸುಳಿಯಲ್ಲಿ ಸುತ್ತುತ್ತಿರುತ್ತಾರೆ” ಎನ್ನುತ್ತಾನೆ ಕೃಷ್ಣ.
ಈ ಶ್ಲೋಕದಲ್ಲಿ ಪರಂತಪ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಇದರ ಮೇಲ್ನೋಟದ ಅರ್ಥ ಶತ್ರುಗಳನ್ನು ಸುಡುವ ಶೂರ ಎಂದು. ನಮ್ಮ ಜೀವನ ಯುದ್ಧದಲ್ಲಿ ನಮ್ಮ ಶತ್ರುಗಳೆಂದರೆ ನಮ್ಮೊಳಗೆ ಇರುವ ಅಜ್ಞಾನ, ಮೋಹ, ಕಾಮ, ಕ್ರೋಧ, ಇತ್ಯಾದಿಗಳು. ಪ್ರತಿಯೊಬ್ಬ ಸಾಧಕ ಕೂಡಾ ಪರತತ್ವದಲ್ಲಿ ಶ್ರದ್ಧೆಯನ್ನಿಟ್ಟು ಇಂತಹ ಶತ್ರುಗಳನ್ನು ಸುಡುವ ಬೆಂಕಿಯಾಗಬೇಕು, ಸುಟ್ಟು ಬೆಳಗುವ ಪರಂತಪನಾಗಬೇಕು.

ಮುಂದಿನ ಶ್ಲೋಕಗಳಲ್ಲಿ ಕೃಷ್ಣ ತಿಳಿಯಬೇಕಾದ ಜ್ಞಾನದ ಬಗ್ಗೆ ಉಪದೇಶ ಮಾಡುತ್ತಾನೆ.                  

No comments:

Post a Comment