Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Monday, May 16, 2011

Bhagavad Gita Kannada Chapter-06 Shloka 4-6

ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ
ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ           

ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ
ಸರ್ವ ಸಂಕಲ್ಪ ಸಂನ್ಯಾಸೀ ಯೋಗಾರೂಢ ತದಾ ಉಚ್ಯತೇ –ಎಲ್ಲ ಕರ್ಮದ ಹೊಣೆಯನ್ನೂ ಭಗವಂತನಿಗರ್ಪಿಸಿ, ಇಂದ್ರಿಯ ವಿಷಯಗಳಲ್ಲಿ ಮತ್ತು ಕರ್ಮಗಳಲ್ಲಿ ಬಗೆಯ ನಂಟು ಕಳೆದುಕೊಂಡಾಗ ಸಾಧನೆಯ ಗುರಿ ಸೇರಿದವನೆನಿಸುತ್ತಾನೆ.

ಅಪರೋಕ್ಷ ಜ್ಞಾನಿಯ ಲಕ್ಷಣವನ್ನು ಹೇಳುತ್ತ ಕೃಷ್ಣ ಹೇಳುತ್ತಾನೆ  “ಯದಾ ಹಿ ನ ಇಂದ್ರಿಯ ಅರ್ಥೇಷು ನ ಕರ್ಮಸು ಅನುಷಜ್ಜತೇ” ಎಂದು.  ಅಂದರೆ ಅಪರೋಕ್ಷ ಜ್ಞಾನಿಗಳು  ಇಂದ್ರಿಯಗಳನ್ನು ಸೆಳೆಯುವ ಸಂಗತಿಗಳಲ್ಲಿ (ಶಬ್ದ, ರೂಪ, ರಸ, ಗಂಧ, ಸ್ಪರ್ಶ),  ಅಥವಾ ಯಾವ ವಿಷಯದಲ್ಲೂ ಅಂಟಿಕೊಂಡಿರುವುದಿಲ್ಲ. ಆತ ಕ್ರಿಯೆ ಮಾಡುತ್ತಾನೆ ಆದರೆ ಅದಕ್ಕೆ ತನ್ನನ್ನು ಅಂಟಿಸಿಕೊಳ್ಳುವುದಿಲ್ಲ. ಸಾಧನೆಯ ಹಾದಿಯಲ್ಲಿರುವ ಸಾಧಕ ಕಷ್ಟಪಟ್ಟು ಇಂದ್ರಿಯ ನಿಗ್ರಹ ಮಾಡಿದರೆ ಅಪರೋಕ್ಷ ಜ್ಞಾನಿಗಳಿಗೆ ಇದು ಸಹಜ ಧರ್ಮವಾಗಿರುತ್ತದೆ. ಋಗ್ವೇದದಲ್ಲಿ ಹೇಳುವಂತೆ “ಎಲ್ಲ ಜಗತ್ತಿನ ನಿಯಾಮಕನಾದ ನರಸಿಂಹ-ಅವನ ಬಯಕೆಯೇ ನನ್ನ ಬಯಕೆಯಾಗಲಿ.ಅವನ ಹೃದಯದಲ್ಲಿ ಏನು ಬಯಕೆ ಇದೆ ಅದೇ ನನ್ನ ಭಾವನೆಯಾಗಲಿ. ಅದಕ್ಕೆ ವಿರುದ್ಧವಾದ ಸಂಕಲ್ಪ ನನಗೆ ಬಾರದೇ ಇರಲಿ”. ಈ ರೀತಿ ಅಪರೋಕ್ಷಜ್ಞಾನಿ ಬಯಸುತ್ತಾನೆ. ಅವನು ಏನನ್ನೂ ಕೂಡಾ ಇಂದ್ರಿಯದ ಮೂಲಕ ಅನುಭವಿಸಬೇಕು ಎಂದು ಬಯಸುವುದಿಲ್ಲ, ಪರಿತಪಿಸುವುದಿಲ್ಲ. ಇಂದ್ರಿಯದ ಮೂಲಕ  ಬಂದ ಅನುಭವದಿಂದ ಪ್ರಭಾವಿತನಾಗಿ ಅದಕ್ಕೆ ಅಂಟಿಕೊಳ್ಳುವುದೂ ಇಲ್ಲ. ಎಲ್ಲವನ್ನೂ ತಟಸ್ಥವಾಗಿ ನೋಡುತ್ತಿರುತ್ತಾನೆ. ನಾವು ಸಮುದ್ರದ ತಟದಲ್ಲಿ ಕುಳಿತು ಸಮುದ್ರವನ್ನು ನೋಡುತ್ತಿದ್ದರೆ ಅಲ್ಲಿ ಅನೇಕ ರೀತಿಯ ಅಲೆಗಳಿರುತ್ತವೆ. ನಾವು ಆ ಅಲೆಗಳನ್ನು ನೋಡಿ ಆನಂದಿಸುತ್ತಿರುತ್ತೇವೆ. ಅಲ್ಲಿ ಬರುವ ತೆರೆಗಳ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಯಾವ ಅಲೆ ಹೇಗೆ ಬಂತೋ ಹಾಗೆ ತಟಸ್ಥವಾಗಿ ಆಸ್ವಾದಿಸುವುದರಲ್ಲಿ ಆನಂದವಿದೆ. ಜೀವನ ಸಾಗರದಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವೂ ಅಲೆಗಳಂತೆ ಬಂದು ಹೋಗುತ್ತಿರುತ್ತವೆ. ಅದರ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಸಮುದ್ರದ ಅಲೆಯನ್ನು ನೋಡಿ ಸಂತೋಷಪಟ್ಟಂತೆ ಈ ಜೀವನದ ಅಲೆಯನ್ನು ಸಹಜವಾಗಿ ನೋಡಿ ಸಂತೋಷಪಡುತ್ತ ಬಾಳುವುದೇ ಅಪರೋಕ್ಷ ಜ್ಞಾನಿಯ ಲಕ್ಷಣ.

ಈ ಅಧ್ಯಾಯದಲ್ಲಿ ಕೃಷ್ಣ ಧ್ಯಾನದ ಸಂಪೂರ್ಣ ಪ್ರಕ್ರೀಯೆಯನ್ನು ಮುಂದೆ ವಿವರಿಸುತ್ತಾನೆ. ಅದಕ್ಕಾಗಿ ನಮ್ಮ ಮನಸ್ಸನ್ನು ಹೇಗೆ ಸಜ್ಜುಗೊಳಿಸಬೇಕು, ನಾವೂ ಯೋಗಾರೂಢರಾಗಬೇಕಾದರೆ  ಏನು ಮಾಡಬೇಕು ಎನ್ನುವುದರ ಪ್ರಸ್ತಾವನೆ ಮುಂದಿನ ಶ್ಲೋಕ.                 
ಉದ್ಧರೇದಾತ್ಮನಾSSತ್ಮಾನಂ ನಾSತ್ಮಾನಮವಸಾದಯೇತ್   
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ

ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್      
ಆತ್ಮಾ ಏವ ಹಿ ಆತ್ಮನಃ ಬಂಧುಃ ಆತ್ಮಾ ಏವ ರಿಪುಃ ಆತ್ಮನಃ –ಬಗೆಯ ಬಲದಿಂದ [ಭಗವಂತನ ಹಸಾದದಿಂದ] ಜೀವವನ್ನು ಮೇಲೆತ್ತಬೇಕು; ಜೀವವನ್ನು ಜಂಜಡಗೊಳಿಸಬಾರದು. ಬಗೆಯೆ[ಭಗವಂತನೆ] ಜೀವದ ಗೆಳೆಯ; ಬಗೆಯೆ[ಭಗವಂತನೆ]ಜೀವದ ಹಗೆಯು.

ಈ ಹಿಂದೆ ಹೇಳಿದಂತೆ ಆತ್ಮ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಆತ್ಮ ಎಂದರೆ ಶರೀರ, ಮನಸ್ಸು, ಜೀವ, ಪರಮಾತ್ಮ. ಹೀಗೆ ಈ ಶ್ಲೋಕದಲ್ಲಿ ಬಂದಿರುವ ಆತ್ಮ ಶಬ್ಧಕ್ಕೆ ಈ ಎಲ್ಲಾ ಅರ್ಥವನ್ನೂ ಜೋಡಿಸಿ ನೋಡಿದರೆ ಅನೇಕ ವಿಚಾರ ಸ್ಪಷ್ಟವಾಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್ ನ ಆತ್ಮಾನಮ್ ಅವಸಾದಯೇತ್” ಅಂದರೆ ನಮ್ಮ ಅಧಃಪಾತಕ್ಕೂ ಕಾರಣ ಮನಸ್ಸು. ನಮ್ಮ ಉದ್ಧಾರಕ್ಕೆ ಕಾರಣ ಮನಸ್ಸು. ಆದ್ದರಿಂದ ಮನಸ್ಸಿನಿಂದ(ಆತ್ಮಾನಾ) ಜೀವದ(ಆತ್ಮಾನಂ) ಉದ್ಧಾರದ ದಾರಿಯನ್ನು ಹುಡುಕು ಎನ್ನುತ್ತಾನೆ ಕೃಷ್ಣ. ಎಂದೂ ಮನಸ್ಸನ್ನು ಕೆಳಕ್ಕೆ ಕಳುಹಿಸಬೇಡ. ಆತ್ಮದ(ಜೀವದ) ಅವಸಾನಕ್ಕೆ ಕಾರಣವಾಗುವಂತೆ ಮನಸ್ಸನ್ನು ಸ್ವಚ್ಛಂದವಾಗಿ ಬಿಡಬೇಡ. ಅದನ್ನು ಮೇಲಕ್ಕೆ ಕೊಂಡು ಹೋಗು. ಮನಸ್ಸು ಕೆಳಗೆ ಹೋದರೆ ಅದು ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತದೆ. ‘ಆ ಮನಸ್ಸನ್ನು ಎತ್ತರಕ್ಕೆ ಕಳಿಸು. ಎತ್ತರಕ್ಕೆ ಹೋದ ಮನಸ್ಸು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನಿಂದ ನಿನ್ನ ಜೀವ ಸ್ವರೂಪವನ್ನು ಉದ್ಧಾರ ಮಾಡಿಕೊ. ಜೀವಕ್ಕೆ ಮನಸ್ಸೇ ಬಂಧು, ಮನಸ್ಸೇ ಶತ್ರು. ಆದ್ದರಿಂದ ಸಾಧನೆ ಮಾಡಬೇಕಾದರೆ  ಮನಸ್ಸನ್ನು ಬಂಧುವಾಗಿ ಪರಿವರ್ತನೆ ಮಾಡಿಕೊ. ಮನಸ್ಸು ನಿನ್ನ ಶತ್ರುವಾಗಿ ನಿಂತರೆ ನಿನ್ನ ಜೀವಮಾನದಲ್ಲೇ ಉದ್ಧಾರವಿಲ್ಲ. ಅದಕ್ಕಾಗಿ ಮೊದಲು ಬುದ್ಧಿಬಲದಿಂದ  ಮನಸ್ಸಿಗೆ ತರಬೇತಿ ಕೊಟ್ಟು ಅದನ್ನು ಗೆಲ್ಲಬೇಕು’  ಎನ್ನುವುದು ಕೃಷ್ಣನ ಸಂದೇಶ. ಮನಸ್ಸನ್ನು ಗೆದ್ದರೆ ಎಲ್ಲವೂ ಪ್ರಶಾಂತ, ಯಾವ ಗೊಂದಲವೂ ಇಲ್ಲ. ಇದು ಧ್ಯಾನಕ್ಕೆ ಬೇಕಾದ ಪೂರ್ವ ಸ್ಥಿತಿ.
ಕೃಷ್ಣನ ಈ ಸಂದೇಶ ಕೇಳಿದಾಗ ನಮಗೆ ಒಂದು ಪ್ರಶ್ನೆ ಎದುರಾಗುತ್ತದೆ. ಈ ಹಿಂದೆ ಕೃಷ್ಣನೇ ಹೇಳಿದಂತೆ ಯಾವುದೂ ನಮ್ಮ ಕೈಯಲ್ಲಿಲ್ಲ. ಭಗವಂತನ ಅನುಗ್ರಹವಿಲ್ಲದೆ ನಾವು ನಮ್ಮ ಮನಸ್ಸನ್ನು ಸ್ವತಂತ್ರವಾಗಿ ಎಂದೂ ನಿಯಂತ್ರಿಸಲು ಸಾಧ್ಯವಿಲ್ಲ. ಹೀಗಿರುವಾಗ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವುದು ಹೇಗೆ? ಈ ನಮ್ಮ ಪ್ರಶ್ನೆಗೆ ಇದೇ ಶ್ಲೋಕದಲ್ಲಿ ಉತ್ತರವಿದೆ.ಆತ್ಮ ಎಂದರೆ ಪರಮಾತ್ಮ ಎನ್ನುವ ಸೂಕ್ಷ್ಮ ಅರ್ಥದಲ್ಲಿ  ಈ ಶ್ಲೋಕವನ್ನು ನೋಡಿದಾಗ ನಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. “ಉದ್ಧರೇತ್ ಆತ್ಮನಾ ಆತ್ಮಾನಮ್” ಅಂದರೆ   “ಆತ್ಮನಿಂದಲೇ(ಭಗವಂತನಿಂದಲೇ) ಆತ್ಮನನ್ನು(ಜೀವವನ್ನು) ಉದ್ಧರಿಸಬೇಕು. ಸಾಮಾನ್ಯವಾಗಿ ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. “ನನ್ನಿಂದ ಇದು ಸಾಧ್ಯವಿಲ್ಲ” ಎನ್ನುತ್ತದೆ ಮನಸ್ಸು. ಆದರೆ ನಮಗೆ ಭಗವಂತ ಬುದ್ಧಿ ಕೊಟ್ಟಿದ್ದಾನೆ, ನಾವು ಅದನ್ನು ಉಪಯೋಗಿಸಬೇಕು. ಬುದ್ಧಿಯನ್ನು ಉಪಯೋಗಿಸಿ ಆ ಭಗವಂತನಲ್ಲಿ “ನನಗೆ ಒಳ್ಳೆಯ ಮನಸ್ಸನ್ನು ಕೊಡು, ನನ್ನನ್ನು ಉದ್ಧಾರದ ದಾರಿಯಲ್ಲಿ ನಡೆಸು, ಸಾಧನೆ ಮಾಡುವಂತಹ ಸದ್ಭುದ್ಧಿಯನ್ನು ಕೊಡು” ಎಂದು ಆ ಭಗವಂತನಲ್ಲಿ ನಿರಂತರ ಪ್ರಾರ್ಥಿಸು. ಆತ ನಮ್ಮ ಅತ್ಯಂತ ಆತ್ಮೀಯ ಹಿತಚಿಂತಕ ಬಂಧು. ಅವನೊಬ್ಬನೇ ಯಾವುದೇ ಸ್ವಾರ್ಥವಿಲ್ಲದ ಶಾಶ್ವತ, ನಿರ್ವ್ಯಾಜ, ನಿರಂತರ  ಬಂಧು. ಆತ ಖಂಡಿತ ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ನಮ್ಮ ಮನಸ್ಸಿನಲ್ಲಿ ಬಂದು ಕೂರುತ್ತಾನೆ.
ಭಗವಂತ ನಾವು ಆತನನ್ನು ಹೇಗೆ ಕಾಣುತ್ತೇವೆ ಅದೇ ಭಾವದಲ್ಲಿ ವ್ಯಕ್ತನಾಗುತ್ತಾನೆ. ದೇವತೆಗಳು ಆತನನ್ನು ಜ್ಞಾನಿಯಾಗಿ ಕಂಡರು- ಆತ ಅವರಿಗೆ ಜ್ಞಾನಿಯಾಗಿ ಕಾಣಿಸಿಕೊಂಡು ಅವರ ಉದ್ಧಾರ ಮಾಡಿದ. ರಾಕ್ಷಸರು ಆತ ಕೊಲ್ಲುವವವ ಮತ್ತು ಶತ್ರು ಎಂದು ತಿಳಿದು ಅವನನ್ನು ದ್ವೇಷಿಸಿದರು- ಆತ ಅವರಿಗೆ ಶತ್ರುವಾಗಿ ಕಾಣಿಸಿದ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಆತ್ಮಾ ಏವ ರಿಪುಃ ಆತ್ಮನಃ” ಎಂದು. ಅಂದರೆ ನಾವು ಅಹಂಕಾರದಿಂದ ದಾರಿ ತಪ್ಪಿದಾಗ ಆತ ನಮಗೆ ನಮ್ಮ ಶತ್ರುವಿನಂತೆ ಬಾಸವಾಗುತ್ತಾನೆ. ಈ ಬಗ್ಗೆ ಮುಂದಿನ ಶ್ಲೋಕ ಇನ್ನೂ ಹೆಚ್ಚಿನ ವಿವರವನ್ನು ಕೊಡುತ್ತದೆ.             


                 ಬಂಧುರಾತ್ಮಾSSತ್ಮನಸ್ತಸ್ಯ ಯೇನಾSತ್ಮೈವಾSತ್ಮನಾ ಜಿತಃ
ಅನಾತ್ಮನಸ್ತು ಶತ್ರುತ್ವೇ ವರ್ತೇತಾSತ್ಮೈವ ಶತ್ರುವತ್

ಬಂಧುಃ ಆತ್ಮಾ ಆತ್ಮನಃ ತಸ್ಯ ಯೇನ ಆತ್ಮಾ ಏವ ಆತ್ಮನಾ ಜಿತಃ
ಅನಾತ್ಮನಃ ತು ಶತ್ರುತ್ವೇ  ವರ್ತೇತ ಆತ್ಮಾ ಏವ ಶತ್ರುವತ್-ಯಾವ ಜೀವ ವಿವೇಕದಿಂದ ಬಗೆಯನ್ನು [ಭಕ್ತಿಯಿಂದ ಭಗವಂತನನ್ನು]ಗೆದೆಯಬಲ್ಲದೋ [ಯಾವ ಜೀವದಿಂದ ಬಗೆ ಹದಗೊಂಡಿದೆಯೋ], ಅಂಥ ಜೀವಕ್ಕೆ ಬಗೆ[ಭಗವಂತ]ಗೆಳೆಯ. ಬಗೆಯನ್ನು[ಭಗವಂತನನ್ನು] ಗೆದೆಯಲಾರದವನಿಗೆ ಬಗೆಯೆ [ಭಗವಂತನೆ]ಹಗೆಯಾಳಿನಂತೆ ಎದುರಾಳಿ.

ಯಾರು ಭಗವಂತನನ್ನು ಗೆದ್ದಿದ್ದಾರೋ(ಭಗವಂತನ ಪ್ರೀತಿಗೆ ಪಾತ್ರರಾಗಿದ್ದಾರೋ) ಅವರಿಗೆ ಆತ ಬಂಧು. ಭಗವಂತನ  ಪ್ರೀತಿಗೆ ಪಾತ್ರರಾಗಲು ಆತನ ಅನುಗ್ರಹ ಬೇಕು. ಅವನ ಅನುಗ್ರಹದಿಂದ ಅವನನ್ನು ಒಲಿಸಿ ಅವನ ಪ್ರೀತಿಗೆ ಪಾತ್ರರಾದವರಿಗೆ ಆತ ಬಂಧು. ಯಾರು ಭಗವಂತನಿಗೆ ಬೆನ್ನು ಹಾಕಿ ಮುಂದೆ ಸಾಗಿದರೋ ಅವರು ಸದಾ ಭಗವಂತನಿಂದ ದೂರ ಸಾಗುತ್ತಾರೆ. ಆತನಿಗೆ ಬೆನ್ನುಹಾಕಿ ಆತನನ್ನು ದ್ವೇಷಿಸುವವರಿಗೆ ಆತ ಶತ್ರುವಂತೆ ಕಾಣುತ್ತಾನೆ. ಈ ಕಾರಣದಿಂದ ನಿರಂತರ ಭಗವಂತನನ್ನು ಪ್ರಾರ್ಥಿಸು. “ಬಂಧುವಾಗಿ ನನ್ನೊಳಗೆ ಬಂದು ನೆಲೆಸು, ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಸು, ನನ್ನನ್ನು ನಿನ್ನತ್ತ ತಿರುಗಿಸಿ ಮುಂದೆ ಕರೆದುಕೊಂಡು ಹೋಗು” ಎನ್ನುವ ಪ್ರಾರ್ಥನೆ ಹಾಗು ಶರಣಾಗತಿ ನಮ್ಮ ಮನಸ್ಸು ಆತನಲ್ಲಿ ನೆಲೆಗೊಳ್ಳುವಂತೆ ಮಾಡುತ್ತದೆ. ಇದು ಧ್ಯಾನದ ಮೊದಲ ಮೆಟ್ಟಿಲು. ಹೀಗೆ ಮನಸ್ಸನ್ನು ಮಣಿಸಲು ಭಗವಂತನ ಅನುಗ್ರಹಪಡೆಯುವ ಪ್ರಯತ್ನ ಮಾಡಿದಾಗ ಏನಾಗುತ್ತದೆ ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.

No comments:

Post a Comment