Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Sunday, April 3, 2011

Bhagavad Gita Kannada Chapter-03 Shloka 33-35


ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ    ।
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ        ॥೩೩॥

ಸದೃಶಮ್  ಚೇಷ್ಟತೇ ಸ್ವಸ್ಯಾಃ ಪ್ರಕೃತೇಃ  ಜ್ಞಾನವಾನ್ ಅಪಿ
ಪ್ರಕೃತಿಮ್  ಯಾಂತಿ ಭೂತಾನಿ ನಿಗ್ರಹಃ ಕಿಮ್  ಕರಿಷ್ಯತಿ--ಎಷ್ಟು ತಿಳಿದವನಾದರೂ ತನ್ನ ಸಂಸ್ಕಾರಕ್ಕೆ (ಸ್ವಭಾವಕ್ಕೆ) ತಕ್ಕಂತೆಯೆ ನಡೆದುಕೊಳ್ಳುತ್ತಾನೆ. ಎಲ್ಲ ಜೀವಿಗಳೂ ಸಂಸ್ಕಾರದ(ಸ್ವಭಾವದ) ಕೈಗೊಂಬೆಗಳು. ಅದುಮಿಟ್ಟರೇನು ಬಂತು.

ಯಾರು ಎಷ್ಟೇ  ಉಪದೇಶ ಮಾಡಿದರೂ ಇಡೀ ಜಗತ್ತಿನಲ್ಲಿ ಎಲ್ಲರೂ ಒಂದೇ ಮಾರ್ಗ ಅನುಸರಿಸುವುದು ಎಂದೂ ಸಾಧ್ಯವಿಲ್ಲ. ಇದಕ್ಕೆ ಕಾರಣ ನಮ್ಮ ನಡೆ, ನಮ್ಮ ಸಂಸ್ಕಾರ, ಹಾಗು ನಮ್ಮ ಜೀವ ಸ್ವಭಾವ. ನಾವು ನಮ್ಮ  ಪೂರ್ವ ಸಂಸ್ಕಾರವನ್ನು ನೋಡಿದರೆ-ಸಾತ್ವಿಕ,ರಾಜಸ,ತಾಮಸವಾದ ಅನೇಕ ಅನುಭವಗಳು ಜನ್ಮ-ಜನ್ಮಾಂತರಗಳಿಂದ ಸುಪ್ತಪ್ರಜ್ಞೆಯಲ್ಲಿರುತ್ತವೆ. ಅನೇಕ ಜನ್ಮಗಳ ಮೂಲಕ ಹರಿದು ಬಂದ ಈ ಜೀವಕ್ಕೆ ಅನೇಕ ಜನ್ಮಗಳ ಅನುಭವದ ಸಂಸ್ಕಾರವಿದೆ. ಒಂದೇ ಜನ್ಮವನ್ನು ನೋಡಿದರೂ ಕೂಡಾ,  ಬೆಳೆದು ಬಂದ ವಾತಾವರಣದ ಛಾಪು,  ಈ ಪ್ರಭಾವ, ಸದಾ ನಮ್ಮ ಮೇಲಿರುತ್ತದೆ. ಇದಲ್ಲದೆ ಪ್ರತೀ ವ್ಯಕ್ತಿಗೆ ಆತನದೇ ಆದ ಜೀವಸ್ವಭಾವವಿರುತ್ತದೆ. ಆತ ಸದಾ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾನೆ. ಮೆಣಸಿನ ಗಿಡ ಹೇಗೆ ಸಿಹಿಯಾದ ಹಣ್ಣನ್ನು ನೀಡಲಾರದೋ ಹಾಗೇ ಒಬ್ಬ ವ್ಯಕ್ತಿಯ ಜೀವಸ್ವಭಾವವನ್ನು ಬದಲಿಸುವುದು ಅಸಾಧ್ಯ. ಸ್ವಭಾವ ಮತ್ತು ಪ್ರಭಾವದ ಸಮ್ಮಿಶ್ರಣ ಈ ಬದುಕು.
ಈ ಮೇಲಿನ ವಿಶ್ಲೇಷಣೆಯನ್ನು ನೋಡಿದಾಗ ಸಹಜವಾಗಿ ನಮಗೊಂದು ಪ್ರಶ್ನೆ ಮೂಡುತ್ತದೆ. “ಜೀವ ಸ್ವಭಾವದಂತೆ ಜೀವದ ನಡೆ; ಸ್ವಭಾವದಂತೆ ಕ್ರಿಯೆ; ಸ್ವಭಾವಕ್ಕೆ ತಕ್ಕಂತೆ ಎಲ್ಲವೂ ಆಗುತ್ತದೆ. ಹಾಗಾದರೆ ಪ್ರಯತ್ನ ಏಕೆ ಮಾಡಬೇಕು?” ಎಂದು.  ಏಕೆಂದರೆ ಸದಾ ಪ್ರಯತ್ನ ಮಾಡುವುದರಿಂದ ಸಂಸ್ಕಾರದಿಂದ ಅಥವಾ  ಪ್ರಭಾವದಿಂದ ಈಚೆ ಬರಲು ಸಾಧ್ಯ. ಸಹಜ ಸ್ವಭಾವದಲ್ಲಿ ನಿಲ್ಲುವ ತನಕ ಪ್ರಭಾವದಿಂದ ಪಾರಾಗುವ ನಿರಂತರ ಪ್ರಯತ್ನ ಅಗತ್ಯ. ನಿರಂತರ ಅಧ್ಯಾತ್ಮ ಸಾಧನೆ  ನಮ್ಮ ಸಹಜ ಸ್ವಭಾವವನ್ನು ಅಭಿವ್ಯಕ್ತಗೊಳಿಸಲು ಸಹಾಯ ಮಾಡುತ್ತದೆ.       

ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ   ।
ತಯೋರ್ನ ವಶಮಾಗಚ್ಛೇತ್ ತೌ  ಹ್ಯಸ್ಯ ಪರಿಪಂಥಿನೌ        ॥೩೪॥

ಇಂದ್ರಿಯಸ್ಯ ಇಂದ್ರಿಯಸ್ಯಅರ್ಥೇ ರಾಗ ದ್ವೇಷೌ ವ್ಯವಸ್ಥಿತೌ
ತಯೋಃ ನ ವಶಮ್ ಅಗಚ್ಛೇತ್ ತೌ ಹಿ ಅಸ್ಯ ಪರಿಪಂಥಿನೌ--ಒಂದೊಂದು ಇಂದ್ರಿಯದ ವಿಷಯದಲ್ಲೂ ಒಲವು -ಹಗೆತನಗಳು ತುಂಬಿವೆ. ಅವುಗಳಿಗೆ ಬಲಿಯಾಗಬಾರದು. ಅವೇ ಸಾಧಕನ ಹಗೆಗಳು.

ನಮ್ಮ ಇಂದ್ರಿಯಗಳಲ್ಲಿ ಎರಡು ವಿಷಯಗಳು ನಮ್ಮ ಶತ್ರುಗಳಾಗಿ ಕೆಲಸ ಮಾಡುತ್ತವೆ. ಅವುಗಳೆಂದರೆ ರಾಗ(ಇಷ್ಟ ಪಡುವುದು, Attachment); ಹಾಗು ಬೇಕು ಎನ್ನುವ ಬಯಕೆ(ಕಾಮ, Desire). ಇಷ್ಟಪಡುವುದು-ರಾಗ, ಅದರಿಂದ ಕಾಮ.  ಇಷ್ಟ ಆಗದೆ- ದ್ವೇಷ, ಅದರಿಂದ ಕೋಪ. ಒಂದು ವಸ್ತುವನ್ನು ಬಯಸಿದೆವು, ಅದು ಸಿಗಲಿಲ್ಲ ಆಗ ಸಿಟ್ಟು. ಅದು ಇನ್ನೊಬ್ಬರಿಗೆ ಸಿಕ್ಕಿತು ಆಗ ದ್ವೇಷ, ಸಿಕ್ಕಿತು ಆದರೆ ಅದು ನಾವು ಅಂದುಕೊಂಡಂತೆ ಇಲ್ಲ ಆಗ ಕೋಪ.  ಮೂಲಭೂತವಾಗಿ ಇರತಕ್ಕ ದೊಡ್ಡ ದೋಷ ಬಯಕೆ. ಯಾವುದನ್ನು ಹೆಚ್ಚು ಹೆಚ್ಚು ಬಯಸುತ್ತೇವೋ ಅದರಿಂದ ಹೆಚ್ಚು ಹೆಚ್ಚು ದುಃಖಕ್ಕೀಡಾಗುತ್ತೇವೆ. ಬಯಕೆಯನ್ನು ಸೀಮಿತಗೊಳಿಸದೆ ಮೇಲೆ ಬರಲು ಸಾಧ್ಯವಿಲ್ಲ. ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ರಾಗ-ದ್ವೇಷ; ಕಾಮ-ಕ್ರೋಧ ತುಂಬಿರುತ್ತದೆ. ಆದರೆ ನಾವು ಎಂದೂ ಈ ಬೇಕು ಬೇಡಗಳಿಗೆ, ರಾಗ ದ್ವೇಷಗಳಿಗೆ ವಶವಾಗಬಾರದು. ನನ್ನದು ಎನ್ನುವ ಅತಿ ಅನುರಾಗ (Possessiveness) ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ನನಗೆ ಬೇಕು, ಅದು ಇನ್ನೊಬ್ಬರಿಗೆ ಸಿಗಬಾರದು ಎನ್ನುವುದು ಪ್ರತೀ ಇಂದ್ರಿಯದಲ್ಲಿ ತುಂಬಿದೆ. ಇದು ನಮ್ಮ ಪ್ರವೃತ್ತಿಯ ಹಿಂದಿರುವ ಅಹಂಕಾರ(Ego). ಕೃಷ್ಣ ಹೇಳುತ್ತಾನೆ: "ಎಂದೂ ಈ ಬೇಕು ಬೇಡಗಳ ದಾಸನಾಗಬೇಡ, ಅವು ನಿನ್ನ ಸಾಧನೆಯ ದಾರಿಗೆ ಅಡ್ಡಗೋಡೆ. ಅವು ನಿನ್ನ ನಿಜ ಶತ್ರುಗಳು" ಎಂದು.

ನಾವು  ಈ ಶತ್ರುಗಳಿಗೆ ಬಲಿಯಾಗದೆ, ನಮ್ಮ ಇಂದ್ರಿಯಗಳನ್ನು ನಾವೇ ವಿಶ್ಲೇಷಿಸಬೇಕು. ನನ್ನ ಇಂದ್ರಿಯ ಏನನ್ನು ಬಯಸುತ್ತಿದೆ, ಏಕೆ ಬಯಸುತ್ತಿದೆ, ಅದರ ಹಿಂದಿರುವ ಸ್ವಾರ್ಥ-ದ್ವೇಷವೇನು, ಇದು ನನ್ನನ್ನು ದಾರಿತಪ್ಪಿಸುವ ಬಯಕೆಯೋ ಅಥವಾ ಮೇಲಕ್ಕೆ ತರುವ ಬಯಕೆಯೋ? ಹೀಗೆ ವಿಚಾರ ಮಾಡಿ ನಮ್ಮ ಬಯಕೆಗಳ ಶುದ್ಧೀಕರಣ ಮಾಡಿಕೊಳ್ಳಬೇಕು. ವೇದದಲ್ಲಿ ಹೇಳುವಂತೆ  'ಹಿಟ್ಟನ್ನು ಸಾರಣಿಗೆಯಿಂದ ಬೇರ್ಪಡಿಸುವಂತೆ ನಾವು ನಮ್ಮ ಮನಸ್ಸೆಂಬ ಸಾರಣಿಗೆಯಿಂದ ನಮ್ಮ ಬಯಕೆಗಳ ಶುದ್ಧೀಕರಣ ಮಾಡಿಕೊಳ್ಳಬೇಕು. ಆಗ ಅಲ್ಲಿ ಸ್ನೇಹದ ಬೆಸುಗೆ ಇರುತ್ತದೆ. ಅಲ್ಲಿ ಲಕ್ಷ್ಮಿ ಸದಾ ನೆಲೆಸುತ್ತಾಳೆ'.

ಇಲ್ಲಿ ಕೃಷ್ಣ  ಅರ್ಜುನನಿಗೆ ಯುದ್ಧ ಮಾಡುವಾಗ ಕೂಡಾ ರಾಗ-ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ, ಕೇವಲ ನ್ಯಾಯಾನ್ಯಾಯದ ಹೋರಾಟ ಎನ್ನುವ ನಿರ್ಲಿಪ್ತತೆಯಿಂದ ಹೋರಾಡು ಎನ್ನುತ್ತಿದ್ದಾನೆ! ಅಂದರೆ ದುರ್ಯೋಧನ ಸತ್ತಾಗ ಸಂತೋಷ ಬೇಡ ಸ್ವಂತ ಮಗ ಸತ್ತಾಗ ದುಃಖ ಬೇಡ ಎನ್ನುವ ಕಿವಿಮಾತಿದು! 

ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ          ॥೩೫॥

ಶ್ರೇಯಾನ್ ಸ್ವ ಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್
ಸ್ವಧರ್ಮೇ ನಿಧನಮ್  ಶ್ರೇಯಃ ಪರಧರ್ಮಃ ಭಯ ಆವಹಃ-- ತನ್ನ ಸ್ವಭಾವಕ್ಕೆ ಪರಕೀಯವಾದ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಅರೆಬರೆಯಾಗಿಯಾದರೂ ಸಹಜ ಧರ್ಮವನ್ನು ಆಚರಿಸುವುದು ಮಿಗಿಲು.
 ಸ್ವಭಾವ ಸಹಜ ಧರ್ಮದಲ್ಲಿ ಸಾವಾದರೂ ಮೇಲು. ಪರಕೀಯ ಧರ್ಮ ಅದಕ್ಕಿಂತ ಭಯಂಕರ.

ಹಿಂದೆ ಹೇಳಿದಂತೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿರುತ್ತದೆ ಹಾಗು ಅದನ್ನು ಬದಲಿಸಲು ಬರುವುದಿಲ್ಲ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ, ಅದು ಸ್ವಧರ್ಮ. ಇದು ಸಹಜ ಕ್ರಿಯೆ.  ನಮ್ಮ ಸಹಜ ಸ್ವಭಾವ ಯಾವುದೋ ಅದನ್ನು ನಾವು ಮಾಡಬೇಕೇ ವಿನಃ ಅನ್ಯವನ್ನಲ್ಲ. ಈ ಕಾರಣಕ್ಕಾಗಿ ತಂದೆ-ತಾಯಿ ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ನಿಜ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವನ್ನು ರೂಪಿಸಬೇಕು. ಇಲ್ಲದಿದ್ದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ.  ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವದಲ್ಲಿದೆ.  ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಇನ್ಯಾರದ್ದೋ  ಧರ್ಮವನ್ನು ಅನುಸರಿಸಿ ಅಲ್ಲ.  ಇಲ್ಲಿ ಕೃಷ್ಣ ಹೇಳುತ್ತಾನೆ "ನಿನ್ನ ಸ್ವಧರ್ಮ ಆಚರಣೆಯಲ್ಲಿ ನ್ಯೂನತೆ ಇದ್ದರೂ, ಅದು ಪರಕೀಯ ಧರ್ಮವನ್ನು ಆಚರಿಸುವುದಕ್ಕಿಂತ ಶ್ರೇಷ್ಠ" ಎಂದು. ಪರ ಧರ್ಮವನ್ನು ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲ, ಅದು ಅಸಹ್ಯ ಅಥವಾ ಭಯಂಕರ.
ಇಲ್ಲಿ  ಯುದ್ಧ ಮಾಡುವುದು ಅರ್ಜುನನ ಸ್ವಭಾವ ಧರ್ಮ. ಅದನ್ನು ಬಿಟ್ಟು ಆತ ತಪಸ್ಸು ಮಾಡುವುದಕ್ಕೆ ಕಾಡಿಗೆ ಹೋಗುವುದು ಆತನ ಸ್ವಧರ್ಮಕ್ಕೆ ವಿರುದ್ಧ. ಆದುದರಿಂದ ಸ್ವಧರ್ಮ ಪಾಲನೆ ಮಾಡು, ರಾಗ ದ್ವೇಷವನ್ನು ಬಿಟ್ಟು ಹೋರಾಡು ಎನ್ನುತ್ತಿದ್ದಾನೆ ಕೃಷ್ಣ.

No comments:

Post a Comment