Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Friday, March 25, 2011

Bhagavad Gita Kannada Ch-03 Shloka 06-07


ಕರ್ಮೇಂದ್ರಿಯಾಣಿ  ಸಂಯಮ್ಯ ಯ ಆಸ್ತೇ ಮನಸಾ ಚರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೬॥

ಕರ್ಮೇಂದ್ರಿಯಾಣಿ  ಸಂಯಮ್ಯ ಯಃ ಆಸ್ತೇ ಮನಸಾ ಚರನ್
ಇಂದ್ರಿಯ ಅರ್ಥಾನ್ ವಿಮೂಢ ಆತ್ಮಾ ಮಿಥ್ಯಾ ಆಚಾರಃ ಸಃ ಉಚ್ಯತೇ- ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ  ಡಂಭಾಚಾರಿ ಎನಿಸುತ್ತಾನೆ.

ಈ ಶ್ಲೋಕದಲ್ಲಿ ಕೃಷ್ಣ ಒಂದು ಮುಖ್ಯವಾದ ವಿಚಾರವನ್ನು ಹೇಳಿದ್ದಾನೆ. ಸಾಮಾನ್ಯವಾಗಿ ಇಂದಿನ ಪ್ರಪಂಚದಲ್ಲಿ ಹೊರಗಿನ ವೇಷಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದನ್ನು ನಾವು ಕಾಣುತ್ತೇವೆ. ಮನಸ್ಸಿನಲ್ಲಿ ಎಲ್ಲಾ ಆಸೆ ಇಟ್ಟುಕೊಂಡು, ಯಾವುದೋ ಭಯದಿಂದ ಹೊರ ನೋಟಕ್ಕೆ ಸದಾಚಾರಸಂಪನ್ನರಂತೆ ಬದುಕುವವರಿದ್ದಾರೆ. ಕೃಷ್ಣ ಇದನ್ನು ಕಪಟ ಧಾರ್ಮಿಕತೆ ಎನ್ನುತ್ತಾನೆ. ನಾವು ಮೊದಲು ನಮ್ಮ ಆತ್ಮ ಸಾಕ್ಷಿಗೆ ವಂಚನೆ ಮಾಡದೆ ಬದುಕಬೇಕು. ಹೊರಗಿನ  ಆಚಾರಕ್ಕಿಂತ ಮೊದಲು ಒಳಗಿನ ಆಚಾರಶುದ್ಧಿ ಮುಖ್ಯ. ಇದಿಲ್ಲದಿದ್ದರೆ ಎಂದೂ ಉದ್ಧಾರವಿಲ್ಲ. ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ  ಡಂಭಾಚಾರಿ ಎನಿಸುತ್ತಾನೆ ಎಂದಿದ್ದಾನೆ ಕೃಷ್ಣ.  

ಯಸ್ತ್ವಿಂದ್ರಿಯಾಣಿ   ಮನಸಾ ನಿಯಮ್ಯಾsರಭತೇsರ್ಜುನ ।
ಕರ್ಮೇಂದ್ರಿಯೈಃ ಕರ್ಮಯೋಗಮಸಕ್ತಃ ಸ ವಿಶಿಷ್ಯತೇ ॥೭॥

ಯಃ ತು ಇಂದ್ರಿಯಾಣಿ  ಮನಸಾ ನಿಯಮ್ಯ ಆರಭತೇ ಅರ್ಜುನ
ಕರ್ಮ ಇಂದ್ರಿಯೈಃ ಕರ್ಮಯೋಗಮ್ ಅಸಕ್ತಃ ಸ ವಿಶಿಷ್ಯತೇ-ಓ ಅರ್ಜುನ, ಇಂದ್ರಿಯಗಳನ್ನು ಮನೋಬಲದಿಂದ ಗೆದ್ದು, ಫಲದ ನಂಟು ತೊರೆದು, ಇಂದ್ರಿಯಗಳ ಮೂಲಕ ಸಾಧನೆಯಲ್ಲಿ ತೊಡಗುವವನು ಮಿಗಿಲಾದವನು.

ಮನಸ್ಸು ಸ್ವಚ್ಛವಾಗಿದ್ದು, ಇಂದ್ರಿಯಗಳ ಮೇಲೆ ಮಾನಸಿಕ ಕಡಿವಾಣ ಗಟ್ಟಿಯಿದ್ದಾಗ- ಕರ್ಮೆಂದ್ರಿಯದಿಂದ ಮಾಡುವ ಸಾಧನೆ  ಕರ್ಮಯೋಗವಾಗುತ್ತದೆ. ಇದು ಶುದ್ಧ ಅಧ್ಯಾತ್ಮ ಸಾಧನೆ. ಈ ಸ್ಥಿತಿಯಲ್ಲಿ ಇಂದ್ರಿಯಗಳು ದಾರಿ ತಪ್ಪುವುದಿಲ್ಲ. ತನ್ನ ಜೀವ ಸ್ವರೂಪದ ಸ್ವಭಾವಕ್ಕನುಗುಣವಾಗಿ ಚತ್ತ ಶುದ್ಧಿಯಿಂದ ಮಾಡುವ ಕರ್ಮ ನಿಜವಾದ ಅಧ್ಯಾತ್ಮ ಸಾಧನೆ. ಈ ರೀತಿಯ ಸಾಧನೆಯಲ್ಲಿ ತೊಡಗುವವನು ಶ್ರೇಷ್ಠನೆನಿಸುತ್ತಾನೆ. ಇಂತವರು ಒಳಗೊಂದು-ಹೊರಗೊಂದು ಆಗಿರದೆ, ಮನೋಬಲದಿಂದ ಇಂದ್ರಿಯಗಳನ್ನು ಗೆದ್ದು, ಫಲದ ನಂಟನ್ನು ತೊರೆದು, ಎತ್ತರಕ್ಕೇರುತ್ತಾರೆ.

No comments:

Post a Comment