Bhagavad GitA in Kannada(ಭಗವದ್ಗೀತೆ ಕನ್ನಡದಲ್ಲಿ)

Bhagavad GitA- Kannada Meaning and interpretation of each Shloka.
Reference: Discourse on GitA By Bannanje Govindachaarya .
ಭಗವದ್ಗೀತೆ ಕನ್ನಡದಲ್ಲಿ. ಆಧಾರ: ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ
ಭಗವದ್ಗೀತೆಯಲ್ಲಿ ಅಡಗಿರುವ ಅಪೂರ್ವ ಅರ್ಥಸಾರಾಂಶ ಹಾಗು ದೈನಂದಿನ ಜೀವನದಲ್ಲಿ
ಭಗವದ್ಗೀತೆಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ. ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಬಂಧಪಟ್ಟಿದ್ದಲ್ಲ, ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.
ಮಹಾಭಾರತ ಹೇಳುವುದು ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.

Tuesday, March 8, 2011

Bhagavad Gita Kannada Chapter-02 Shloka 52-53

ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ    ॥೫೨॥

ಯದಾ ತೇ ಮೋಹ ಕಲಿಲಮ್  ಬುದ್ಧಿಃ ವ್ಯತಿತರಿಷ್ಯತಿ
ತದಾ ಗಂತಾ ಅನಿ ನಿರ್ವೇದಮ್  ಶ್ರೋತವ್ಯಸ್ಯ ಶ್ರುತಸ್ಯ ಚ --ಎಂದು ನಿನ್ನ ಬುದ್ಧಿ ಅಜ್ಞಾನದ ಕೊಳೆಯನ್ನು ಕಳೆದುಕೊಳ್ಳುವುದೋ, ಅಂದು  ಮುಂದೆ ಕೇಳುವ, ಹಿಂದೆ ಕೇಳಿದ ಉಪದೇಶದ ಪೂರ್ತಿ ಫಲವನ್ನು ಪಡೆಯುವೆ.

ಯಾವಾಗ ನಾವು ಓದಿದ್ದು ಕೇಳಿದ್ದು ಸಾರ್ಥಕವಾಗುವುದುನಮ್ಮ ಬುದ್ಧಿ ಎಷ್ಟು ಕೇಳಿದರೂ ಕೂಡಾ ಪುನಃ ಗೊಂದಲದಲ್ಲೇ ಇದ್ದರೆ, ಎಷ್ಟು ಕೇಳಿಯೂ ಉಪಯೋಗವಿಲ್ಲ. ಓದುವುದರಿಂದ, ಕೇಳುವುದರಿಂದ ನಮ್ಮ ಮನಸ್ಸಿನ ಕೊಳೆ ತೊಳೆದು ಹೋಗಿ ಮನಸ್ಸು ತಿಳಿಯಾಗಬೇಕು. ಇಂತಹ ಮನಸ್ಸಿಗೆ ಎಂದೂ ದುಗುಡ, ಆತಂಕ ಇರುವುದಿಲ್ಲ. ಈ ಸ್ಥಿತಿಯಲ್ಲಿ ಕೋಪ ಬಾರದು. ಇಂತಹ ರಾಗ-ದ್ವೇಷ ರಹಿತವಾದ, ಎಂತಹ ಸಂದರ್ಭದಲ್ಲೂ ಸಮತೋಲನ ಕಳೆದುಕೊಳ್ಳದ ಮನಸ್ಸು ಬಂದಾಗ, ಓದಿದ್ದು, ಕೇಳಿದ್ದು ಸಾರ್ಥಕವಾಗುತ್ತದೆ.ಇಂತಹ ಸ್ಥಿತಿಯಲ್ಲಿ ಹಿಂದೆ ಕೇಳಿದ, ಹಾಗು ಇನ್ನು ಕೇಳುವ ಉಪದೇಶ ಪೂರ್ತಿ ಫಲವನ್ನು ಕೊಡುತ್ತದೆ.

ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ।
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ    ॥೫೩॥

ಶ್ರುತಿ ವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ 
ಸಮಾದೌ ಅಚಲಾ ಬುದ್ಧಿಃ ತದಾ  ಯೋಗಮ್ ಅವಾಪ್ಸ್ಯಸಿ- ಮೊದಲು ಶ್ರುತಿಗಳಿಗೆ ಹೊಂದಿಕೊಳ್ಳದಿದ್ದ,[ಮತ್ತೆ ಶ್ರುತಿಗಳಿಂದ ಶ್ರುತಿಗೂಡಿದ,] ನಿನ್ನ ಬುದ್ಧಿ ಎಂದು ನಿಜದ ಅರಿವಿನಿಂದ ಗಟ್ಟಿಗೊಂಡು, ಸಮಾಧಿಯಲ್ಲಿ ನಲುಗದೆ ನಿಲ್ಲುವುದೋ, ಅಂದು ಗುರಿ ತಲುಪುವೆ.
ಇಲ್ಲಿ 'ವಿಪ್ರತಿಪನ್ನಾ' ಅಂದರೆ 'ಅಭಿಪ್ರಾಯಭೇದ'. ಮೊದಲು ಶ್ರುತಿಗಳಿಂದ (ಶ್ರವಣದಿಂದ) ಗೊಂದಲವೆನಿಸುತ್ತದೆ. ನಂತರ ಅಲ್ಲಿಂದ ವೇದಕ್ಕೆ ಹೋದಾಗ-ವೇದದಲ್ಲಿ ಹೇಳಿದ ಸಂಗತಿಗೆ ಮನಸ್ಸು ವಿರುದ್ಧವಾಗಿ ಯೋಚಿಸುತ್ತದೆ. ಆದರೆ ಒಮ್ಮೆ ಮನಸ್ಸು ತಿಳಿಯಾದಾಗ, ಶ್ರುತಿಯಲ್ಲಿ ಹೇಳಿದ ತ್ರಿಗುಣಾತೀತ ತತ್ವದಲ್ಲಿ ಮನಸ್ಸು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಮೊದಲು ತ್ರೈಗುಣ್ಯ ವಿಷಯವಾಗಿದ್ದು ನಂತರ ತ್ರೈಗುಣ್ಯದ  ವಿಷವನ್ನು ಪರಿಹರಿಸುವಂತಾಗುತ್ತದೆ (ಯಾಪಯತಿ). ಒಮ್ಮೆ ಮನಸ್ಸು ನಿರ್ಮಲವಾದಾಗ ಅದು ವೇದಕ್ಕೆ ಶ್ರುತಿಗೂಡು(Tune)ತ್ತದೆ. ಅದರಿಂದಾಗಿ ವೇದದಲ್ಲಿ ಹೇಳಿರುವ ವಿಚಾರ ಮತ್ತು ನಮ್ಮ ಯೋಚನೆಗಳಲ್ಲಿ ಯಾವುದೇ ವೆತ್ಯಾಸ ಕಾಣುವುದಿಲ್ಲ. ಮನಸ್ಸು ವೈದಿಕ ವಾಙ್ಮಯದಲ್ಲಿ ನೆಲೆ ನಿಲ್ಲುತ್ತದೆ. ಈ ಸ್ಥಿತಿಯಲ್ಲಿ ಧ್ಯಾನ(Meditation) ಮಾಡಿದರೆ ಮನಸ್ಸು ಸದಾ ಭಗವಂತನಲ್ಲಿ ನೆಲೆಗೊಳ್ಳುತ್ತದೆ. ಇದಕ್ಕೂ ಮುಂದೆ ಹೋಗಿ ನಿಶ್ಚಲವಾದ  ಸಮಾಧಿ ಸ್ಥಿತಿಯಲ್ಲಿ, ಸ್ವರೂಪ ಚಿಂತನದಲ್ಲಿ ನೋಡಿದಾಗ- ಭಗವಂತನ ನಿಜವಾದ ರೂಪ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದಿಲ್ಲ-ಆತ್ಮ ಕೆಲಸ ಮಾಡುತ್ತಿರುತ್ತದೆ. ಆತ್ಮದ ಕಣ್ಣಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ-ಇದು ಸಾಧನೆಯ ಪೂರ್ಣ ಫಲ.

No comments:

Post a Comment